ಬೆಂಗಳೂರು: ಹುಡುಗರ ಗ್ಯಾಂಗ್ ಕಟ್ಟಿಕೊಂಡು ನಗರದೆಲ್ಲೆಡೆ ಬೈಕ್ ಕಳ್ಳತನ ಮಾಡಿಸುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಇತರ ಇಬ್ಬರನ್ನು ಬಂಧಿಸುವಲ್ಲಿ ಮಾಗಡಿ ರೋಡ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಆಗಿರುವ, ಒಒಡಿ ಮೇರೆಗೆ ಐಪಿಎಸ್ ಅಧಿಕಾರಿಯೊಬ್ಬರ ಕಾರ್ ಡ್ರೈವರ್ ಆಗಿರುವ ಹೊನ್ನಪ್ಪ ಹಾಗೂ ಸಹಚರ ರಮೇಶ್ ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.
ಕೃತ್ಯದಲ್ಲಿ ಭಾಗಿಯಾಗಿದ್ದ ತಮಿಳುನಾಡು ಮೂಲದ ಇಬ್ಬರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರಿಂದ 77 ಲಕ್ಷ ರೂಪಾಯಿ ಮೌಲ್ಯದ 53 ಬೈಕ್ಗಳನ್ನು ಜಪ್ತಿ ಮಾಡಲಾಗಿದೆ.
2016ನೇ ಬ್ಯಾಚ್ ಕಾನ್ಸ್ಟೇಬಲ್ ಆಗಿರುವ ಹೊನ್ನಪ್ಪ ವಿದ್ಯಾರಣ್ಯಪುರ ಠಾಣೆಯಲ್ಲಿ ಕೆಲಸ ಮಾಡುವಾಗ ಮತ್ತೋರ್ವ ಆರೋಪಿ ರಮೇಶ್ ಜೊತೆಗೂಡಿ ಕಳ್ಳತನ ಮಾಡಿದ ಬೈಕ್ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು. ಇದರಿಂದ ಪ್ರೇರಣೆಗೊಂಡು ಸುಲಭವಾಗಿ ಹೆಚ್ಚು ಹಣ ಸಂಪಾದಿಸಲು ಕಾನ್ಸ್ಟೇಬಲ್ ಅಪ್ರಾಪ್ತರನ್ನು ಒಗ್ಗೂಡಿಸಿಕೊಂಡು ಕಳ್ಳತನ ಮಾಡಿಸಲು ತಂಡ ರಚಿಸಿಕೊಂಡಿದ್ದ.
ಪೊಲೀಸಪ್ಪನ ಮನೆ ಮುಂದೆ ಕಳ್ಳರೇ ಬೈಕ್ ತರುತಿದ್ರು..
ಅಪ್ರಾಪ್ತರಿಂದ ಬೈಕ್ ಕಳ್ಳತನ ಮಾಡಿಸಿದರೆ ಕಾನೂನು ಪ್ರಕಾರ ಅವರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಅರಿತುಕೊಂಡಿದ್ದ ಕಾನ್ಸ್ಟೇಬಲ್, ದುಬಾರಿ ಬೆಲೆಯ ಹಾಗೂ ಹೆಚ್ಚು ಬೇಡಿಕೆಯಿರುವ ಬೈಕ್ ಗಳನ್ನೇ ಕಳ್ಳತನ ಮಾಡಲು ಪ್ರೇರೆಪಿಸುತ್ತಿದ್ದ. ಕಾನ್ಸ್ಟೇಬಲ್ ಅಭಯಹಸ್ತದಿಂದಲೇ ಅಪ್ರಾಪ್ತರು ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದರು. ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಒಎಲ್ಎಕ್ಸ್ ವೆಬ್ಸೈಟ್ ನೋಡಿ ಬೈಕ್ ನಂಬರ್ ಬದಲಾವಣೆ
ಕಳ್ಳತನ ಮಾಡಿದ ಬೈಕ್ಗಳನ್ನು ವಿದ್ಯಾರಣಪುರದಲ್ಲಿನ ಕಾನ್ಸ್ಟೇಬಲ್ ಮನೆಗೆ ತಂದುಕೊಡುತ್ತಿದ್ದರು. ಒಎಲ್ಎಕ್ಸ್ ಜಾಲತಾಣದಲ್ಲಿ ಮಾರಾಟಕ್ಕಿರುವ ಅಸಲಿ ಬೈಕ್ಗಳ ರಿಜಿಸ್ಟರ್ ನಂಬರ್ ನೋಡಿ ತಾವು ಕದ್ದಿರುವ ಬೈಕ್ಗಳ ನಂಬರ್ ಅಳಿಸಿ ಬೇರೆ ಬೇರೆ ರಿಜಿಸ್ಟರ್ ನಂಬರ್ ಹಾಕುತ್ತಿದ್ದರು. ಬಳಿಕ ದುಬಾರಿ ಬೆಲೆಯ ಬೈಕ್ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ದಾಖಲಾತಿ ಕೇಳಿದರೆ ಬೈಕ್ ಮೇಲೆ ಬ್ಯಾಂಕ್ ಲೋನ್ ಇದೆ.
ಹಣ ನೀಡಿದರೆ ಮುಂದಿನ ವಾರ ದಾಖಲಾತಿ ನೀಡುವೆ ಎಂದು ಯಾಮಾರಿಸುತ್ತಿದ್ದರು. ಅಲ್ಲದೇ ಗ್ರಾಹಕರನ್ನು ನಂಬಿಸಿಲು ನಕಲಿ ಆರ್ಸಿ ಮಾಡಿಸಿದ್ದರು. ರಾಜಸ್ಥಾನ, ಬೆಂಗಳೂರು, ರಾಣೆಬೆನ್ನೂರು ಹಾಗೂ ಹಾವೇರಿ ಸೇರಿದಂತೆ ಅನೇಕ ಕಡೆಗಳಲ್ಲಿ ಬೈಕ್ ಕಳ್ಳತನ ಮಾಡಿದ್ದಾರೆ ಎಂದು ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ: IT Raid: SP ನಾಯಕನ ಮನೆಯಲ್ಲಿ 150 ಕೋಟಿ ಅಕ್ರಮ ಹಣ ಪತ್ತೆ: ಎಣಿಸಿ ಎಣಿಸಿ ಸುಸ್ತಾದ ಅಧಿಕಾರಿಗಳು..!