ಮುಂಬೈ (ಮಹಾರಾಷ್ಟ್ರ): ಉದ್ಯಮಿ ಮುಖೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಎಸ್ಯುವಿ ಕಾರು ಪತ್ತೆ ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಈ ಕೇಸ್ನ ಸುಳಿಯಲ್ಲಿ ಸಿಲುಕಿದ್ದ ಮನ್ಸುಖ್ ಹಿರೇನ್ ಅವರು ನಿಗೂಢವಾಗಿ ಸಾವನ್ನಪ್ಪಿದ್ದ ಸ್ಥಳದಲ್ಲೇ ಮತ್ತೊಂದು ಮೃತದೇಹ ಪತ್ತೆಯಾಗಿದೆ.
ಮಾ.5 ರಂದು ಉದ್ಯಮಿ ಮನ್ಸುಖ್ ಹಿರೇನ್ ಅವರ ಮೃತದೇಹ ಥಾಣೆ ಜಿಲ್ಲೆಯ ಮುಂಬ್ರಾದ ರೇತಿ ಬಂದರ್ ಪ್ರದೇಶದಲ್ಲಿರುವ ನದಿಯೊಂದರಲ್ಲಿ ಪತ್ತೆಯಾಗಿತ್ತು. ಅದೇ ಸ್ಥಳದಲ್ಲಿ ಇಂದು ರೇತಿಬಂದರ್ ನಿವಾಸಿ ಶೇಖ್ ಸಲೀಮ್ ಅಬ್ದುಲ್ (48) ಎಂಬ ವ್ಯಕ್ತಿಯ ಶವ ಕಂಡು ಬಂದಿದ್ದು, ಸ್ಥಳಕ್ಕೆ ಮುಂಬೈ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಕರಣ ಹಿನ್ನೆಲೆ
ಕಳೆದ ತಿಂಗಳು ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಜಿಲೆಟಿನ್ ಇರಿಸಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಮುಂಬೈ ಕ್ರೈಂ ಬ್ರ್ಯಾಂಚ್ ಹಾಗೂ ಎಟಿಎಸ್ ಜಂಟಿಯಾಗಿ ಪ್ರಕರಣ ತನಿಖೆ ನಡೆಸುತ್ತಿದ್ದು, ಮುಂಬೈ ಮೂಲದ ಮನ್ಸುಖ್ ಹಿರೇನ್ ಅವರು ಸ್ಕಾರ್ಪಿಯೋ ಕಾರು ಮಾಲೀಕ ಎಂದು ಹೇಳಲಾಗಿತ್ತು.
ಆದರೆ, ಮಾರ್ಚ್ 5ರಂದು ಥಾಣೆಯ ನದಿಯೊಂದರಲ್ಲಿ ಮನ್ಸುಖ್ ಹಿರೇನ್ ಮೃತದೇಹ ಪತ್ತೆಯಾಗಿತ್ತು. ಈ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಮುಂಬೈನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶಂಕಿಸಿದೆ. ಆದರೆ ಆ ಸ್ಕಾರ್ಪಿಯೋ ಕಾರು ಮಾಲೀಕ ಮೃತ ಮನ್ಸುಖ್ ಹಿರೇನ್ ಅಲ್ಲ, ಥಾಣೆ ಮೂಲದ ಸ್ಯಾಮ್ ನ್ಯೂಟನ್ ಎಂಬ ವಿಚಾರ ಕೂಡ ತನಿಖೆ ವೇಳೆ ಬೆಳಕಿಗೆ ಬಂದಿತ್ತು.
ಮನ್ಸುಖ್ ಹಿರೇನ್ ನಿಗೂಢ ಸಾವಿನ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಕೂಡ ಹೆಸರು ಕೇಳಿಬಂದಿತ್ತು. ಇವರ ವಿರುದ್ಧ ಅನೇಕ ಕೇಸ್ಗಳು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.