ತುಮಕೂರು: ಬೆಡ್ ಸಿಗದೆ ಬೆಂಗಳೂರಿನಿಂದ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಬಂದು ಚಿಕಿತ್ಸೆಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಅವರಲ್ಲಿ ಬಹುತೇಕರು ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಆಕ್ಸಿಜನ್ ಪಡೆದುಕೊಳ್ಳುತ್ತಿರುವವರು ಬಿಡುಗಡೆಯಾದರೆ ಮಾತ್ರ ಬೆಡ್ಗಳು ಸಿಗುವಂತಹ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ಜಿಲ್ಲೆಯಲ್ಲಿ 1,900 ಸೋಂಕಿತರು ಆಕ್ಸಿಜನ್ ಬೆಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇ. 25ರಷ್ಟು ಮಂದಿಯನ್ನು ಆಕ್ಸಿಜನ್ ಬೆಡ್ಗಳಿಂದ ಬಿಡುಗಡೆ ಮಾಡಿದ್ರೆ, 400 ಮಂದಿ ಹೊಸ ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ.
ಕೆಲ ಸೋಂಕಿತರು 14 ದಿನಗಳ ಚಿಕಿತ್ಸೆ ಪೂರ್ಣಗೊಳಿಸಿದ್ದಾರೆ. ಕೆಲವರಿಗೆ ಕೋವಿಡ್ಗೆ ನೆಗೆಟಿವ್ ಬಂದರೂ ಆಕ್ಸಿಜನ್ ವರದಿ ನೆಗೆಟಿವ್ ಆಗಿರುವುದಿಲ್ಲ. ಅಂತಹವರನ್ನು ಡಿಸ್ಚಾರ್ಜ್ ಮಾಡಿದರೂ ಅವರ ಮನೆಗೆ ಸಿಲಿಂಡರ್ ಕೊಡಬೇಕಿದೆ. ಆದರೆ, ಅಷ್ಟರಮಟ್ಟಿಗೆ ಸಿಲಿಂಡರ್ ಸಂಖ್ಯೆ ಇಲ್ಲದಾಗಿದೆ. ಹೀಗಾಗಿ, ಆಕ್ಸಿಜನ್ ಕಾನ್ಸಂಟ್ರೇಟ್ ಒಂದು ರೀತಿ ಜೀವ ಕೊಟ್ಟಂತೆ ಆಗುತ್ತದೆ. ಕೇರಳದಲ್ಲಿ ಬಸ್ಗಳಲ್ಲಿಯೂ ಆಕ್ಸಿಜನ್ ಕಾನ್ಸಂಟ್ರೇಟ್ ಬಳಸಲಾಗುತ್ತಿದೆ. ಹೀಗಾಗಿ, ಜಿಲ್ಲೆಯಲ್ಲಿಯೂ ಇದನ್ನು ಬಳಕೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಓದಿ: ಸರ್ಕಾರದಿಂದ ಏನೂ ಮಾಡಲು ಸಾಧ್ಯವಿಲ್ಲ.. ದೇವರೇ ಕೊರೊನಾ ತಡೆಯಬೇಕು ಎಂದ ಬಿಜೆಪಿ ಸಂಸದ!