ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಟ್ವೀಟ್ ಮಾಡಿರುವ ಕುರಿತು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಖಂಡನೆ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಕಾಮನ್ ಸೆನ್ಸ್ ಇಲ್ಲ. ಮುಖ್ಯಮಂತ್ರಿಯಾಗಿದ್ದವರಿಗೆ ಪ್ರಧಾನ ಮಂತ್ರಿಯ ಬಗ್ಗೆ ಹೇಗೆ ಮಾತನಾಡಬೇಕು, ಯಾವ ಪದ ಬಳಕೆ ಮಾಡಬೇಕು ಅಂತ ಗೊತ್ತಿಲ್ಲ. ಯಾರಿಗೆ ಆಗಲಿ ಮಾತನಾಡಲು ಒಂದು ಭಾಷೆ ಇದೆ. ದೇಶದಲ್ಲಿ ಜಲ ಪ್ರಳಯ ಆಗಿದೆ. ರಾಜ್ಯಕ್ಕೆ ಸಾಕಷ್ಟು ಹಣ ಬಂದಿದೆ. ಇನ್ನೂ ಹಣ ಬರಬೇಕಿದೆ. ಹಣ ಬಿಡುಗಡೆ ಮಾಡಬೇಕು ಅಂತ ನಾವು ಪ್ರಧಾನ ಮಂತ್ರಿಯವರನ್ನು ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಬರ ಬಂದಾಗ ಕೇಂದ್ರದ ಕಾಂಗ್ರೆಸ್ ಸರ್ಕಾರ ಎಷ್ಟು ಹಣ ನೀಡಿತ್ತು ಅಂತ ನಮಗೂ ಗೊತ್ತಿದೆ. ನಾವು ಕೂಡ ಹಿಂದೆ ಹಣಕ್ಕಾಗಿ ಒತ್ತಾಯ ಮಾಡಿದ್ದೇವೆ. ಈ ರೀತಿಯ ಪದಗಳನ್ನು ಬಳಸಿರಲಿಲ್ಲ. ಈಗ ಕಾಂಗ್ರೆಸ್ ನವರಿಗೆ ಅದರಲ್ಲೂ ಸಿದ್ದರಾಮಯ್ಯನವರಿಗೆ ನಿರಾಸೆ ಮೂಡಿದೆ. ಅವರು ಸರ್ಕಾರ ಕಳೆದುಕೊಂಡರು, ಸಿಎಂ ಸ್ಥಾನ ಕಳೆದು ಕೊಂಡರು, ಮುಂದೆ ಅಧಿಕಾರ ಸಿಗುತ್ತದೆಯೂ ಇಲ್ಲ, ಅಂತ ಅವರಿಗೆ ಬೇಸರ ಮೂಡಿದೆ. ಇದಕ್ಕೆ ಅವರು ಒಳ್ಳೆಯ ಭಾಷೆ ಬಳಸುತ್ತಿಲ್ಲ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿರವರ ಬಗ್ಗೆ ಸಿದ್ದರಾಮಯ್ಯನವರು ಬಳಸಿರುವ ಪದವನ್ನು ನಾನು ಖಂಡಿಸುತ್ತೇನೆ. ನಾವು ದೇವರನ್ನು ಧರ್ಮವನ್ನು ನಂಬಿದ್ದೇವೆ. ಅದಕ್ಕೆ ವಿಭೂತಿ, ರುದ್ರಾಕ್ಷಿ ಹಾಕಿಕೊಳ್ಳುತ್ತೇವೆ. ಇದಕ್ಕೆ ನೀವು ಟೀಕೆ ಮಾಡುವುದು ಸರಿಯಲ್ಲ. ನಿಮಗೆ ದೇವರ ಬಗ್ಗೆ, ಧರ್ಮದ ಬಗ್ಗೆ ನಂಬಿಕೆ ಇಲ್ಲ. ನಮಗೆ ನಂಬಿಕೆ ಇದೆ. ನಾವು ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ದೇಶವನ್ನು ಉದ್ಧಾರ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ ಎಂದರು.
ಇನ್ನು ಡಿ.ಕೆ.ಶಿವಕುಮಾರ್ ಅವರು ಏಸು ಪ್ರತಿಮೆ ನಿರ್ಮಾಣ ಮಾಡಲು ಅವಕಾಶ ಮಾಡಿ ಕೊಟ್ಟಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಭೂಮಿಯನ್ನು ಯಾರು, ಯಾಕೆ ಕೊಟ್ಟರು ಎಂಬ ಬಗ್ಗೆ ಸರಿನಾ, ತಪ್ಪಾ ಅಂತ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ರು.