ಶಿವಮೊಗ್ಗ: ಪ್ರವಾಸಿಗರ ಹಾಟ್ ಫೇವರಿಟ್ ತಾಣವಾಗಿರುವ ಜಿಲ್ಲೆಗೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಪಶ್ಚಿಮ ಘಟ್ಟ ಶ್ರೇಣಿಯ ಕೊಡಚಾದ್ರಿಯ ತಪ್ಪಲಿನಲ್ಲಿ ಕೇಬಲ್ ಕಾರ್ ಮಾಡಲು ಯೋಜನೆ ರೂಪಿಸಲಾಗಿದೆ.
ಸಂಸದ ಬಿ. ವೈ. ರಾಘವೇಂದ್ರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ನೆರವಿನೊಂದಿಗೆ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಜೋಗ ಜಲಪಾತದ ಬಳಿ ಜಿಪ್ ಲೈನ್ ಅಳವಡಿಸಲು ಚಾಲನೆ ನೀಡಲಾಗಿತ್ತು. ಇದೀಗ ಪಶ್ಚಿಮ ಘಟ್ಟ ಶ್ರೇಣಿಯ ಕೊಡಚಾದ್ರಿಯ ತಪ್ಪಲಿನಲ್ಲಿ ಕೇಬಲ್ ಕಾರ್ ಮಾಡಲು ಯೋಜನೆ ರೂಪಿಸಲಾಗಿದೆ.
ಉಡುಪಿಯ ಕೊಲ್ಲೂರಿನ ಮುಕಾಂಬಿಕಾ ದೇವಾಲಯ ಸಮೀಪದಿಂದ ಹೊಸನಗರದ ಕೊಡಚಾದ್ರಿಯವರೆಗೆ ಸುಮಾರು 11 ಕಿ.ಮೀ ಉದ್ದದ ಕೇಬಲ್ ಕಾರ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈ ಮೂಲಕ ಪ್ರವಾಸೋದ್ಯಮದಲ್ಲಿ ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಬೆಸೆಯುವ ಕಾರ್ಯ ಮಾಡಲಾಗ್ತಿದೆ.
ಕೊಡಚಾದ್ರಿಯಲ್ಲಿ ಕೇಬಲ್ ಕಾರ್ ಯೋಜನೆ ಸಂಬಂಧ ಮಾತುಕತೆ ನಡೆಯುತ್ತಿದೆ. ಬಂಡವಾಳ ಹೂಡಲು ಖಾಸಗಿಯವರು ಸಹ ಮುಂದೆ ಬಂದಿದ್ದಾರೆ. ಸುಮಾರು 1,000 ಕೋಟಿ ರೂ. ವೆಚ್ಚದಲ್ಲಿ ಕೇಬಲ್ ಕಾರ್ ನಿರ್ಮಿಸಿ, ನಿರ್ವಹಣೆ ಮಾಡುವ ಸಂಬಂಧ ಮಾತುಕತೆ ನಡೆಸಲಾಗುತ್ತಿದೆ.
ಜೊತೆಗೆ ಶಿವಮೊಗ್ಗ ಸಮೀಪದ ಸಕ್ರೇಬೈಲು ಆನೆ ಬಿಡಾರದ ಸಮೀಪ ಜೈವಿಕ ಉದ್ಯಾನವನ ನಿರ್ಮಿಸಲು ಸಹ ಯೋಜನೆ ರೂಪಿಸಲಾಗುತ್ತಿದೆ. ಬನ್ನೆರುಘಟ್ಟ ಮಾದರಿಯಲ್ಲಿ ಸುಮಾರು 100 ಎಕರೆ ಜಾಗದಲ್ಲಿ ಉದ್ಯಾನವನ ರೂಪಿಸಿ, ಪ್ರವಾಸಿಗರನ್ನು ಸೆಳೆಯಲು ಪ್ಲಾನ್ ರೂಪಿಸಲಾಗುತ್ತಿದೆ.
ಒಟ್ಟಾರೆಯಾಗಿ, ಮಲೆನಾಡಿಗೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲು ಸರ್ಕಾರ ಮುಂದಾಗಿ ಹೊಸ ಯೋಜನೆ ರೂಪಿಸಿ, ಅನುಷ್ಟಾನಗೊಳಿಸಲು ಮುಂದಾಗಿರುವುದು ನಿಜಕ್ಕೂ ಸಂತಸದ ವಿಚಾರ.