ಮೈಸೂರು: ಅಕಸ್ಮಾತ್ತಾಗಿ ನಾಲೆಗೆ ಬಿದ್ದು ಪ್ರಾಣಾಪಾಯದಿಂದ ಒದ್ದಾಡುತ್ತಿದ್ದ ಜಿಂಕೆಯನ್ನ ಯುವಕರು ರಕ್ಷಣೆ ಮಾಡಿರುವ ಘಟನೆ ಕಳಲೆ ಗ್ರಾಮದಲ್ಲಿ ನಡೆದಿದೆ.
ಜಮೀನಿಗೆ ತೆರಳಿದ್ದ ಗ್ರಾಮದ ಯುವಕರಾದ ರವಿಚಂದ್ರ, ವಿನೋದ್, ರಾಜೇಶ್ ಎಂಬುವರು ನಾಲೆಗೆ ಬಿದ್ದಿದ್ದ ಗಂಡು ಜಿಂಕೆಯನ್ನ ಮೇಲೆತ್ತಿಕೊಂಡು ಬಂದು ರಕ್ಷಣೆ ಮಾಡಿದ್ದಾರೆ. ನಂಜನಗೂಡು ತಾಲೂಕಿನ ಕಳಲೆ-ಏಚಗುಂಡ್ಲ ಗ್ರಾಮಗಳ ರಸ್ತೆಯ ಬೀಚನಹಳ್ಳಿ ಕಬಿನಿ ನಾಲೆಯಲ್ಲಿ ಜಿಂಕೆ ಆಯತಪ್ಪಿ ಬಿದ್ದಿದ್ದು, ಪರಿಣಾಮ ಜಿಂಕೆಯ ಕಾಲುಗಳಿಗೆ ಮತ್ತು ಮುಖಕ್ಕೆ ಗಾಯಗಳಾಗಿವೆ.
ಇನ್ನು ಈ ಕುರಿತು ಯುವಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿ ಶರತ್ ಭೇಟಿ ನೀಡಿ, ಜಿಂಕೆಯನ್ನು ವಶಕ್ಕೆ ಪಡೆದು ಚಿಕಿತ್ಸೆಗೆ ಒಳಪಡಿಸಿದ್ದಾರೆ.