ಮೈಸೂರು: ಸ್ವಾಮಿ ವಿವೇಕಾನಂದರು ಜಿಲ್ಲೆಗೆ ಬಂದಾಗ ಉಳಿದುಕೊಂಡಿದ್ದ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಮೈಸೂರಿನ ರಾಮಕೃಷ್ಣ ಆಶ್ರಮ ಹಾಗೂ ಸ್ಮಾರಕ ನಿರ್ಮಾಣ ಸಮಿತಿ ಸದಸ್ಯರು ಬುಧವಾರ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ 113 ವರ್ಷ ಹಳೆಯದಾದ ಎನ್ಟಿಎಂಎಸ್ ಶಾಲೆಯ ಸಮೀಪ, ಸ್ವಾಮಿ ವಿವೇಕಾನಂದರು ಅಂದು ವಾಸ್ತವ್ಯ ಹೂಡಿದ್ದರು. ಅಲ್ಲಿಂದ ಚಿಕಾಗೋ ಭಾಷಣ ನೀಡಲು ತೆರಳಿದ್ದರು. ಅವರು ವಾಸ್ತವ್ಯ ಹೂಡಿದ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕಾದರೆ 113 ವರ್ಷ ಹಳೆಯದಾದ ಸರ್ಕಾರಿ ಶಾಲೆಯನ್ನು ಕೆಡವಬೇಕು. ಈ ಶಾಲೆ ಉಳಿಯಲು ಅನೇಕ ಪ್ರಗತಿಪರರು ಹೋರಾಟ ಮಾಡಿದ್ದಾರೆ.
ಆದರೆ, ಬುಧವಾರ ಬೆಂಗಳೂರಿಗೆ ಭೇಟಿ ನೀಡಿದ ರಾಮಕೃಷ್ಣ ಆಶ್ರಮದ ಸ್ವಾಮೀಜಿ, ಸ್ಮಾರಕ ನಿರ್ಮಾಣ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ, ಡಾ. ಹಂಪಾ ನಾಗರಾಜಯ್ಯ, ಡಾ. ಕೆ. ಚಿದಾನಂದಗೌಡ, ಹಿರಿಯ ಸಾಹಿತಿ ಡಾ. ಸಿ.ಪಿ. ಕೃಷ್ಣಕುಮಾರ್ ಸೇರಿದಂತೆ ಪ್ರಮುಖರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಶಾಲೆಯನ್ನು ಉಳಿಸುತ್ತಾರೋ ಅಥವಾ ಸ್ಮಾರಕ ನಿರ್ಮಾಣಕ್ಕೆ ಅಸ್ತು ಎನ್ನುತ್ತಾರೋ ಕಾದು ನೋಡಬೇಕಿದೆ.