ಮೈಸೂರು : ಜಗದೀಶ್ ಶೆಟ್ಟರ್ ಮಾಜಿ ಸಿಎಂ, ಪಕ್ಷದ ಹಿರಿಯ ನಾಯಕರು. ಅವರು ಅಮಿತ್ ಶಾರನ್ನು ಹೊಸದಾಗಿ ಭೇಟಿ ಮಾಡುತ್ತಿಲ್ಲ. ಅವರ ದೆಹಲಿ ಭೇಟಿಯ ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಸಚಿವ ಎಸ್.ಟಿ ಸೋಮಶೇಖರ್ ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ನಗರ ಬಿಜೆಪಿ ಕಚೇರಿಯಲ್ಲಿ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮಾಧ್ಯಮಗಳ ಜೊತೆ ಮಾತನಾಡಿದರು. ಅಮಿತ್ ಶಾ ಸಿಎಂಗೆ ಸಮಯ ನೀಡಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ರೀತಿ ನಿಮಗೆ ಹೇಳಿದವರು ಯಾರು?. ಸಿಎಂ ಪೂರ್ವ ನಿಗದಿತ ಕಾರ್ಯಕ್ರಮಗಳಿಂದ ಅಮಿತ್ ಶಾ ಭೇಟಿಯಾಗಿಲ್ಲ.
ಸಿಎಂ ಅವರು ಹೈಕಮಾಂಡ್ ಭೇಟಿಗೆ ಯಾವಾಗ ಬೇಕಾದರೂ ಸಮಯ ಪಡೆಯಲಿದ್ದಾರೆ. ಜೊತೆಗೆ ಪ್ರಧಾನಿ ಸೇರಿದಂತೆ ಹಿರಿಯ ನಾಯಕರನ್ನು ಭೇಟಿಯಾಗುತ್ತಾರೆ ಎಂದು ಪ್ರತಿಕ್ರಿಯಿಸಿದರು. ಕೋರ್ ಕಮಿಟಿ ಸಭೆಯಲ್ಲಿ ದೂರುಗಳಿದ್ದರೆ ದೆಹಲಿಗೆ ಬನ್ನಿ ಎಂದು ಅಮಿತ್ ಶಾ ಹೇಳಿಲ್ಲ. ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯರಾದ ಜಗದೀಶ್ ಶೆಟ್ಟರ್ ದೆಹಲಿಯಲ್ಲಿ ಅಮಿತ್ ಶಾ ಭೇಟಿ ಆಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಡಿ ಎಂದು ಹೇಳಿಕೆ ನೀಡಿದರು.
ಓದಿ: ರಾತ್ರೋರಾತ್ರಿ ದೆಹಲಿಗೆ ತೆರಳಿದ ಶೆಟ್ಟರ್: ಕುತೂಹಲ ಕೆರಳಿಸಿದ ಮಾಜಿ ಸಿಎಂ ಪ್ರಯಾಣ
ನಾಲ್ಕು ದಿನ ದಕ್ಷಿಣ ಪದವೀಧರ ಕ್ಷೇತ್ರದ ಪ್ರಚಾರ : ಏಪ್ರಿಲ್ 11 ರಿಂದ 14ರವರೆಗೆ ದಕ್ಷಿಣ ಪದವೀಧರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಕೈಗೊಳ್ಳಲಾಗುವುದು. ರೈತರಿಗೆ ಶೇ.1ರಷ್ಟು ಉಳಿತಾಯ ಆಗುತ್ತದೆ ಎಂಬ ಆಲೋಚನೆಯಿಂದ ಡಿಸಿಸಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್ ವಿಲೀನ ಚಿಂತನೆ ಮಾಡಲಾಗಿದೆ. ಈ ವಿಚಾರದ ಬಗ್ಗೆ ಬೇರೆ-ಬೇರೆ ರಾಜ್ಯಗಳಲ್ಲಿ ವಿಲೀನವಾಗಿದ್ದು, ಅಲ್ಲಿಗೆ ನಮ್ಮ ಅಧಿಕಾರಿಗಳು ಪ್ರವಾಸ ಮಾಡಿ ಸಾಧಕ-ಬಾಧಕಗಳನ್ನ ಚರ್ಚಿಸಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಚಾಮುಂಡಿ ಬೆಟ್ಟಕ್ಕೆ ರೊಪ್ ವೇ ಮಾಡುವ ವಿಚಾರದ ಬಗ್ಗೆ ಸಿಎಂ ಗಮನಕ್ಕೆ ತರಲಾಗುತ್ತದೆ. ಮೈಸೂರು ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗಿದೆ. ಇನ್ನೂ ಉಸ್ತುವಾರಿ ಸಚಿವರು ಮೈಸೂರು ಪ್ರವಾಸ ಮಾಡುವುದು ಕಡಿಮೆ ಎಂಬ ಆರೋಪ ಸರಿಯಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಬಜೆಟ್ ಮಂಡನೆ : ಪಾಲಕೆಯ ಮೇಯರ್ ಅವಧಿ ಮುಗಿದಿದ್ದು, ಮೀಸಲಾತಿ ಪ್ರಕಟವಾಗಿಲ್ಲ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚುನಾವಣಾ ವಿಚಾರ ನಗರಾಭಿವೃದ್ಧಿ ಸಚಿವರ ವ್ಯಾಪ್ತಿಗೆ ಬರುತ್ತದೆ. ಬಜೆಟ್ ಆದ ಬಳಿಕ ಮೀಸಲಾತಿ ಪ್ರಕಟವಾಗುವ ಸಾಧ್ಯತೆ ಇದೆ. ಮೇಯರ್ ಚುನಾವಣೆಯಲ್ಲಿ ಕಳೆದ ಬಾರಿ ಜೆಡಿಎಸ್ ಸಹಕಾರ ನೀಡಿತ್ತು.
ಈ ಬಾರಿ ಬೆಂಬಲ ಕೇಳುವ ಬಗ್ಗೆ ಹೈಕಮಾಂಡ್ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು. ಈ ಬಾರಿ ಅವಧಿ ಮುಗಿದಿರುವ ಮೇಯರ್ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಪಾಲಿಕೆಯ ಬಜೆಟ್ ಮಂಡಿಸಲಿದ್ದಾರೆ ಎಂದು ಇದೇ ಸಂಧರ್ಭದಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆ ನೀಡಿದರು.