ಮೈಸೂರು: ಈಗಾಗಲೇ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಅಕ್ಕಪಕ್ಕದ ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿರುವುದರಿಂದ, ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ಒಮಿಕ್ರಾನ್ ಹರಡದಂತೆ ಸೂಕ್ತ ಕ್ರಮ ಕೈಗೊಂಡಿದ್ದೇವೆ. ದೇಶಾದ್ಯಂತ ಒಮಿಕ್ರಾನ್ ಬಗ್ಗೆ ಕಟ್ಟೆಚ್ಚರಿಕೆ ವಹಿಸಲಾಗಿದ್ದು, ರಾಜ್ಯದಲ್ಲೂ ಮಂಜಾಗ್ರತ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.
(ಇದನ್ನೂ ಓದಿ: ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೆ ಮಾರ್ಗಸೂಚಿ ಬಿಡುಗಡೆ: ಯಾವುದಕ್ಕೆ ನಿರ್ಬಂಧ?)
ಫೆಬ್ರವರಿಯಲ್ಲಿ ಒಮಿಕ್ರಾನ್ ಜಾಸ್ತಿಯಾಗುತ್ತೆ ಎಂಬುದಕ್ಕೆ ಪುರಾವೆ ಇಲ್ಲ, ಅದಕ್ಕೆ ಪೂರಕವಾದ ದಾಖಲೆ ಇಲ್ಲ, ಸಂಶೋಧನೆಯೂ ನಡೆದಿಲ್ಲ. ಆದಾಗ್ಯೂ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದೇವೆ. ಮಾರ್ಗೂಸೂಚಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹೊಸ ವರ್ಷದ ಸಂಭ್ರಮ ಒಮಿಕ್ರಾನ್ ಹರಡಲು ದಾರಿ ಮಾಡಿಕೊಡದಿರಲಿ ಎಂದು ಡಿ.28ರಿಂದ ಜ.7 ರ ವರೆಗೆ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡುವುದಾಗಿ ಇಂದು ಬೆಳಗ್ಗೆ ಸಿಎಂ ಘೋಷಿಸಿದ್ದಾರೆ. ಜತೆಗೆ, ಕರ್ಫ್ಯೂಗೆ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ಜನರ ಓಡಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗಿದೆ.
(ಇದನ್ನೂ ಓದಿ: ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಕಚ್ಚಿದ ಹಾವು: ಹೇಗಿದೆ ಆರೋಗ್ಯ ಸ್ಥಿತಿ?)
ಮೂರನೇ ಅಲೆ ಎದುರಿಸಲು ಸನ್ನದ್ಧ: ಸಿಎಂ ಬಸವರಾಜ ಬೊಮ್ಮಾಯಿ
ಮುಂಬರುವ ಕೋವಿಡ್ನ ಸಂಭಾವ್ಯ ಮೂರನೇ ಅಲೆಯನ್ನು ಎದರಿಸಲು ಸರ್ಕಾರ ಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಹೇಳಿದರು.
ಜೆ.ಎಸ್.ಎಸ್ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿದ್ದ 13 ಕೆಎಲ್ ಸಾಮಾರ್ಥ್ಯದ ಆಕ್ಸಿಜನ್ ಟ್ಯಾಂಕ್ ಹಾಗೂ 1 ಸಾವಿರ ಕೆಎಲ್ ಸಾಮಾರ್ಥ್ಯದ ಆಕ್ಸಿಜನ್ ಜನರೆಟರ್ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. ಈಗಾಗಲೇ ಹೊಸ ಐಸಿಯುಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ವರ್ಷ ಹಾಕಲಾಗಿದ್ದ ಆಕ್ಸಿಜನ್ ಪ್ಲಾಂಟ್ ಸಿದ್ಧತೆ ಮಾಡಿಕೊಳ್ಳಲಾಗಿದೆ. ಔಷಧಿಗಳನ್ನು ತಯಾರಿಸಿಕೊಳ್ಳಲಾಗಿದೆ. ಮೊದಲ ಡೋಸ್ ವ್ಯಾಕ್ಸಿನೇಷನ್ ಶೇ.97ರಷ್ಟಾಗಿದ್ದು, ಎರಡನೇ ಡೋಸ್ ವ್ಯಾಕ್ಸಿನೇಷನ್ ಶೇ.76 ರಷ್ಟಾಗಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಇದೊಂದು ದಾಖಲೆ ಎಂದು ಹೇಳಿದರು.
ವ್ಯಾಕ್ಸಿನೇಷನ್ ಶೇ.100ರಷ್ಟು ಆದರೆ ಮಾತ್ರ ಕೋವಿಡ್ನಿಂದ ಪಾರಾಗಬಹುದು. ಇದಕ್ಕಾಗಿ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಾ ಬರುತ್ತಿದೆ. ಇದರ ಜೊತೆಗೆ ಸರ್ಕಾರ ಕಠಿಣ ಕ್ರಮ ಕೈಗೊಳಲಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಅಕ್ಷರ ದಾಸೋಹ, ಅನ್ನ ದಾಸೋಹದ ಜೊತೆಗೂ ಜೆಎಸ್ಎಸ್ ಸಂಸ್ಥೆ ಆರೋಗ್ಯ ದಾಸೋಹವನ್ನು ನೀಡುತ್ತಿದೆ. ಸರ್ಕಾರಕ್ಕೆ ಕೋವಿಡ್ ಒಂದು ಸವಾಲಾಗಿತ್ತು. ಈ ಸವಾಲನ್ನು ಸರ್ಕಾರದ ಜೊತೆಗೆ ಹಲವಾರು ಸಂಘ ಸಂಸ್ಥೆಗಳು, ಆಸ್ಪತ್ರೆಗಳ ಸಹಕಾರದಿಂದ ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ವೈದ್ಯಕೀಯ ಲೋಕಕ್ಕೆ ಕೋವಿಡ್ ಹೊಸ ಪಾಠ ಕಲಿಸಿದೆ. ಪ್ರಾಣವಾಯುವಿನ ಅಗತ್ಯತೆಯ ಬಗ್ಗೆ ತಿಳಿಸಿದೆ. ಕೊರೊನಾ ಮೂರನೇ ಅಲೆ ವಿಶ್ವದೆಲ್ಲೆಡೆ ಹರಡುತ್ತಿದೆ. ಅದರ ತೀವ್ರತೆ ಹೇಗಿದೆ ಎಂಬುದರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಮುನ್ನೆಚ್ಚರಿಕೆ, ಮುಂಜಾಗ್ರತೆ ಹಾಗೂ ಕಡ್ಡಾಯ ಲಸಿಕೆ ಪಡೆಯುವುದೇ ಇದಕ್ಕೆ ಪರಿಹಾರ ಎಂದು ಹೇಳಿದರು.
ವಿಶ್ವದಲ್ಲಿ ಶೇ.35 ರಿಂದ 40 ಕೋಟಿ ಜನರಿಗೆ ಶ್ರವಣ ದೋಷವಿದೆ. 60 ವರ್ಷ ಮೇಲ್ಪಟ್ಟವರಲ್ಲಿ ಶೇ.50ರಷ್ಟು ಶ್ರವಣ ದೋಷವಿದೆ. ಈ ನಿಟ್ಟಿನಲ್ಲಿ ಶ್ರವಣ ದೋಷ ಪತ್ತೆ ಆಪ್ ಅನ್ನು ಜೆಎಸ್ಎಸ್ ಆಸ್ಪತ್ರೆ ಅಭಿವೃದ್ಧಿ ಪಡಿಸಿರುವುದು ಶ್ಲಾಘನೀಯ. ಇದರ ಮೂಲಕ ಶ್ರವಣ ದೋಷಿತರಿಗೆ ಚಿಕಿತ್ಸೆ ನೀಡಬಹುದು ಎಂದು ಹೇಳಿದರು.