ಮೈಸೂರು: ನಾನು ಜೆಡಿಎಸ್ನಲ್ಲೇ ಇರಬೇಕಾ, ಕಾಂಗ್ರೆಸ್ ಸೇರಬೇಕಾ ಅಥವಾ ಬಿಜೆಪಿಗೆ ಹೋದರೆ ಒಳ್ಳೆಯದಾ ಎಂಬ ಬಗ್ಗೆ ಕೊರೊನಾ ಕಡಿಮೆಯಾದ ನಂತರ ಕ್ಷೇತ್ರದ ಪ್ರವಾಸ ಮಾಡಿ ಮತದಾರರ ಅಭಿಪ್ರಾಯದಂತೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ.
ಇಂದು ತಮ್ಮ ಚಾಮುಂಡೇಶ್ವರಿ ಕ್ಷೇತ್ರದ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಈ ವೇಳೆ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ಜಟಾಪಟಿ ಬಗ್ಗೆ ಪ್ರತಿಕ್ರಿಯಿಸಿದರು. ಚುನಾವಣೆಗೆ ಇನ್ನೂ 23 ತಿಂಗಳು ಬಾಕಿಯಿದೆ. ಈಗಲೇ ಅಧಿಕಾರದ ಬಗ್ಗೆ ಮಾತನಾಡಬಾರದು. ಯಾರಿಗೆ ಅಧಿಕಾರ ನೀಡಬೇಕು ಎಂಬುದನ್ನು ಮತದಾರರು ತೀರ್ಮಾನ ಮಾಡುತ್ತಾರೆ. ಅಲ್ಲಿಯವರೆಗೆ ಕಾಯಬೇಕು ಎಂದರು.
ಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಸುದ್ದಿಯ ಬಗ್ಗೆ ಉತ್ತರಿಸಿದ ಅವರು, ನಾನು ಜೆಡಿಎಸ್ನಲ್ಲೇ ಇರಬೇಕಾ, ಕಾಂಗ್ರೆಸ್ ಸೇರಬೇಕಾ ಅಥವಾ ಬಿಜೆಪಿಗೆ ಹೋದರೆ ಒಳ್ಳೆಯದಾ ಎಂಬ ಬಗ್ಗೆ ಕೊರೊನಾ ಕಡಿಮೆಯಾದ ನಂತರ ಕ್ಷೇತ್ರದ ಪ್ರವಾಸ ಮಾಡಿ ಮತದಾರರ ಅಭಿಪ್ರಾಯದಂತೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಹಿಂದೆ ಹುಣಸೂರು ಜನರ ಮಾತು ಕೇಳದೆ ಬಿಜೆಪಿಯಿಂದ ಚುನಾವಣೆಗೆ ನಿಂತು ಸೋತಿದ್ದೆ. ಅಂತಹ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂದು ಹೇಳಿದರು.
ಎನ್ಟಿಎಂ ಶಾಲೆ ಜಾಗದಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಾಣದ ಬಗ್ಗೆ ಮತನಾಡಿದ ಜಿಟಿಡಿ, ಶಾಲೆಯನ್ನು ಉಳಿಸಿ ಸ್ಮಾರಕ ನಿರ್ಮಾಣ ಮಾಡಲು ಅವಕಾಶವಿದೆ. ಆದ್ದರಿಂದ ಶಾಲೆಯೂ ಉಳಿಯಲಿ, ವಿವೇಕಾನಂದರ ಸ್ಮಾರಕವು ನಿರ್ಮಾಣವಾಗಲಿ. ಮೈಸೂರಿನಲ್ಲಿ ಬಹಳಷ್ಟು ಜನ ಸಾಹಿತಿಗಳು, ಬುದ್ಧಿಜೀವಿಗಳು ಇದ್ದಾರೆ. ಇಂತಹ ಸಾಂಸ್ಕೃತಿಕ ನಗರದಲ್ಲಿ ಈ ವಿಚಾರವನ್ನು ಅನಾವಶ್ಯಕ ಚರ್ಚೆಗೆ ಎಡೆಮಾಡಿಕೊಡದೇ ಎಲ್ಲರೂ ಕುಳಿತು ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಮೀಸಲಾತಿ ಪ್ರಕಟವಾಗಿದ್ದು, ಈ ಮೀಸಲಾತಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಸಮಯವಿದೆ. ನವೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆಯಬಹುದು. ಅಲ್ಲಿಯವರೆಗೆ ಕಾದು ನೋಡೊಣ ಎಂದು ತಿಳಿಸಿದರು.
ಇದನ್ನೂ ಓದಿ: ಭ್ರಷ್ಟಾಚಾರ ಆರೋಪ: ಸಚಿವ ಮುರುಗೇಶ್ ನಿರಾಣಿ ಪುತ್ರನ ವಿರುದ್ಧ ಎಸಿಬಿಗೆ ದೂರು