ಮೈಸೂರು: ಜಯಚಾಮರಾಜೇಂದ್ರ ಒಡೆಯರ್ ನಿರ್ಮಿಸಿದ ಆಯುರ್ವೇದ ಆಸ್ಪತ್ರೆಯೊಂದು ಶತಮಾನೋತ್ಸವ ಕಂಡಿದ್ದು, ದುರಂತವೆಂದರೆ ಇಲ್ಲಿಗೆ ಬರುವ ರೋಗಿಗಳು ತಪಾಸಣೆ ಮಾತ್ರ ಮಾಡಿಸಿಕೊಂಡು ಔಷಧಗಳನ್ನು ಮೆಡಿಕಲ್ ಕೇಂದ್ರದಲ್ಲಿ ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ಕೆ.ಆರ್ ಮೊಹಲ್ಲಾದಲ್ಲಿರುವ ನಗರ ಪಾಲಿಕೆ ಅಧೀನದಲ್ಲಿರುವ ಆಯುರ್ವೇದ ಆಸ್ಪತ್ರೆಯಲ್ಲಿ ಕಳೆದ ಆರು ವರ್ಷಗಳಿಂದ ಔಷಧಿಯಿಲ್ಲದೇ ಆಯುರ್ವೇದ ಚಿಕಿತ್ಸೆ ಪಡೆಯಲು ಬರುವ ರೋಗಿಗಳು ತಪಾಸಣೆ ಮಾತ್ರ ಮಾಡಿಸಿಕೊಂಡು ಹೊರಗಡೆ ಹೋಗಿ ಔಷಧಿಗಳನ್ನು ತೆಗೆದುಕೊಳ್ಳತ್ತಾರೆ ಎನ್ನಲಾಗಿದೆ.
ಮೈಸೂರಿನ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಆಯುರ್ವೇದ ಚಿಕಿತ್ಸೆ ಬಗ್ಗೆ ಅಪಾರ ಒಲವಿದ್ದ ಕಾರಣ ಆಯುರ್ವೇದ ಪಂಡಿತರಿಗೆ ಹೇಳಿ ಕೆ.ಆರ್ ಮೊಹಲ್ಲದಲ್ಲಿ ಮೊದಲಿಗೆ ಆಯುರ್ವೇದ ಆಸ್ಪತ್ರೆಯನ್ನು ತೆರೆದರು. ಅಂದಿನಿಂದ ಇಂದಿನವರೆಗೂ ಆಸ್ಪತ್ರೆ ನಡೆದುಕೊಂಡು ಬಂದಿದೆ. ಆದರೆ ಕಳೆದ ಆರು ವರ್ಷಗಳಿಂದ ಸರಿಯಾಗಿ ಔಷಧಿ ಸಿಗದೇ ರೋಗಿಗಳು ಬೇಸರಗೊಂಡಿದ್ದಾರೆ. ಈ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.
ಈ ಕುರಿತು ಸ್ಥಳೀಯರಾದ ರಾಮಚಂದ್ರ ಎಂಬುವರು ಮಾತನಾಡಿ, ಶತಮಾನೋತ್ಸವ ಕಂಡಿರುವ ಆಸ್ಪತ್ರೆಯನ್ನು ಉಳಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಸಕ್ತಿ ವಹಿಸಬೇಕು. ಇಲ್ಲಿಗೆ ವೈದ್ಯರು ಸರಿಯಾದ ವೇಳೆಗೆ ಆಗಮಿಸಿ ತಪಾಸಣೆ ಮಾಡುತ್ತಾರೆ. ಆದರೆ ಔಷಧಿ ಸಿಗದೇ ಇರುವುದು ಬೇಸರ ತಂದಿದೆ. ಯಾವುದೇ ಕಾರಣಕ್ಕೂ ಆಸ್ಪತ್ರೆ ಮುಚ್ಚಬಾರದು ಎಂದು ಮನವಿ ಮಾಡಿದ್ದಾರೆ.