ಮೈಸೂರು: ಜುಬಿಲಂಟ್ ಕಾರ್ಖಾನೆಯ ಕಾರ್ಮಿಕರಿಗೆ ಯಾವ ಮೂಲದಿಂದ ಕೊರೊನಾ ವೈರಸ್ ತಗುಲಿದೆ ಎಂಬುದರ ಕುರಿತು ಮೂರು-ನಾಲ್ಕು ಮೂಲಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಮೃಗಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೇ.3ರವರೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಮೈಸೂರಿನಲ್ಲಿ ಲಾಕ್ಡೌನ್ ಸಡಿಲಿಕೆ ಇಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಸೇರಿದಂತೆ ಹಲವು ಮುಖಂಡರ ಜೊತೆ ಮಾತುಕತೆ ನಡೆಸಲಾಗುವುದು. ನಾಳಿನ ಕ್ಯಾಬಿನೆಟ್ ಸಭೆಯಲ್ಲೂ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜುಬಿಲಂಟ್ ಕಾರ್ಖಾನೆಯ ಸುತ್ತಮುತ್ತಲಿರುವ ಕೆಲವು ಕಾರ್ಖಾನೆಯವರು ವೇತನ ಕೊಡುತ್ತಿಲ್ಲ ಎಂದು ನೌಕರರು ನನ್ನ ಬಳಿ ಹೇಳಿದ್ದರು. ಆದ್ದರಿಂದ ಕಾರ್ಮಿಕ ಸಚಿವರನ್ನು ಕರೆದು ಮೈಸೂರಿನಲ್ಲೇ ಕಾರ್ಖಾನೆ ಮಾಲೀಕರ ಸಭೆ ನಡೆಸುವುದಾಗಿ ತಿಳಿಸಿದರು. ಮೈಸೂರಿನಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿದೆ ಎಂದು ತಿಳಿಸಿದರು.