ಮೈಸೂರು : ಸಚಿವ ಕೆ ಎಸ್ ಈಶ್ವರಪ್ಪ ನೀಡಿರುವ ಹೇಳಿಕೆ ಬಗ್ಗೆ ಸ್ಪಷ್ಟತೆ ಇಲ್ಲ. ಅವರು ಯಾವ ಅರ್ಥದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ಮೊದಲು ತೋರಿಸಲಿ. ಆಮೇಲೆ ಉಳಿದಿದ್ದು ಚರ್ಚೆ ಆಗಲಿ ಎಂದು ಸಚಿವ ಕೆ ಎಸ್ ಈಶ್ವರಪ್ಪ ಪರ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಬ್ಯಾಟಿಂಗ್ ಮಾಡಿದರು.
ಸದನದಲ್ಲಿ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಅಹೋರಾತ್ರಿ ಧರಣಿ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಒಂದು ಹೇಳಿಕೆಯನ್ನು ಹಿಡಿದುಕೊಂಡು ಕಾಂಗ್ರೆಸ್ ಈ ರೀತಿ ಸದನದ ಸಮಯ ಹಾಳು ಮಾಡುತ್ತಿರುವುದು ತಪ್ಪು. ಸಿದ್ದರಾಮಯ್ಯನಂತಹ ಹಿರಿಯ ನಾಯಕರು ಇಂತಹ ನಡುವಳಿಕೆ ಪ್ರದರ್ಶಿಸಬಾರದಿತ್ತು.
ಸದನದ ಒಳಗಡೆ ತಪ್ಪುಗಳು ಆಗುತ್ತಿರುತ್ತವೆ. ಅದಕ್ಕೆ ಕ್ಷಮೆ ಕೇಳಿ ಮುಂದುವರೆದ ಅನೇಕ ಉದಾಹರಣೆಗಳಿವೆ. ಈಗಲೂ ಅಂತಹ ನಡವಳಿಕೆಗಳನ್ನು ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿಗಳು, ಎರಡೂ ಸದನಗಳ ನಾಯಕರು ಹಾಗೂ ಸ್ಪೀಕರ್ಗಳು ತುರ್ತಾಗಿ ಸಭೆ ನಡೆಸಬೇಕು. ಈ ಮೂಲಕ ಜನರ ಸಮಸ್ಯೆಗಳ ಚರ್ಚೆಗೆ ಸದನದಲ್ಲಿ ಅವಕಾಶ ನೀಡಬೇಕು.
ಮುಂದೆ ಚುನಾವಣೆ ಇರೋದ್ರಿಂದ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಜನ ಎಲ್ಲವನ್ನು ಹೊರಗಡೆ ನೋಡುತ್ತಿದ್ದಾರೆ. ಪ್ರತಿಭಟನೆಯೇ ಎಲ್ಲದಕ್ಕೂ ಪರಿಹಾರ ಅಲ್ಲ ಎಂದು ಕುಟುಕಿದರು.