ಮೈಸೂರು: ಖಾತೆ ಸಂಖ್ಯೆ ತಪ್ಪಾಗಿ ಕೂಲಿಕಾರ್ಮಿಕರೊಬ್ಬರ ಬ್ಯಾಂಕ್ ಅಕೌಂಟ್ಗೆ ಹಣ ವರ್ಗಾವಣೆಗೊಂಡಿತ್ತು. ಆದ್ರೆ ಈ ಹಣವನ್ನು ಮರಳಿ ಪಡೆಯದೆ, ಅವರ ಮನೆಯ ಪರಿಸ್ಥಿತಿ ಅರಿತು ಅವರಿಗೆ ತಮ್ಮ ಹಣವನ್ನು ನೀಡಿ ವ್ಯಕ್ತಿಯೊಬ್ಬರು ಹೃದಯವಂತಿಕೆ ಮೆರೆದ ಘಟನೆ ನಗರದಲ್ಲಿ ಜರುಗಿದೆ.
ನಡೆದಿದ್ದಿಷ್ಟು?
ಹರ್ಷವರ್ಧನ್ ಗೌಡ ಎಂಬುವರು ಏಪ್ರಿಲ್ 21 ರಂದು ಖಾತೆ ಸಂಖ್ಯೆ 1173110010050699ಗೆ 20,000 ರೂ. ಹಣ ಕಳುಹಿಸಬೇಕಾಗಿತ್ತು. ಆದರೆ ಅವರು ಚಲನ್ನಲ್ಲಿ ನಿಗದಿತ ಸಂಖ್ಯೆಯ ಬದಲಾಗಿ 1183110010050699 ನಮೂದಿಸಿದ್ದರು. ಇದರಿಂದ ಹಣ ಬೇರೆಯೊಬ್ಬರಿಗೆ ವರ್ಗಾವಣೆಗೊಂಡಿತ್ತು.
ಈ ವಿಷಯವನ್ನು ಹರ್ಷವರ್ಧನ್ ಅವರು ಬ್ಯಾಂಕ್ ಮ್ಯಾನೇಜರ್ಗೆ ತಿಳಿಸಿದ್ದರು. ಖಾತೆಯನ್ನು ಪರಿಶೀಲಿಸಿದಾಗ ಅದು ಎಸ್.ವಿ. ರಾಚಪ್ಪ ಎಂಬ ಕೂಲಿ ಕಾರ್ಮಿಕರಿಗೆ ಸೇರಿದ್ದಾಗಿತ್ತು. ಅವರಿಗೆ ಕರೆ ಮಾಡಿದಾಗ ಅವರು ಮೂಲತಃ ಶಿವಮೊಗ್ಗದವರಾಗಿದ್ದು, ತಮಿಳುನಾಡಿನ ಬಾರ್ಡರ್ ಕೃಷ್ಣಗಿರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಜೀವನ ನಡೆಸುತ್ತಿರುವುದಾಗಿ ತಿಳಿದು ಬಂದಿತ್ತು.
ನಂತರ ಹರ್ಷವರ್ಧನ್ ಗೌಡ ತಮ್ಮ ಸ್ನೇಹಿತನನ್ನು ಅಲ್ಲಿಗೆ ಕಳುಹಿಸುತ್ತಾರೆ. ನಮಗೆ ಹಣ ಸಂದಾಯವಾಗಿರುವ ವಿಚಾರವೇ ಗೊತ್ತಿಲ್ಲ ಎಂದು ರಾಚಪ್ಪ ತಿಳಿಸಿ ಯಾವುದೇ ರೀತಿಯಲ್ಲಿ ಆಕ್ಷೇಪ ಎತ್ತದೆ ಹಣವನ್ನು ಡ್ರಾಮಾಡಿ ಅವರಿಗೆ ಕೊಡುತ್ತಾರೆ. ಹಣವನ್ನು ಪಡೆದ ಹರ್ಷವರ್ಧನ್ ಗೆಳೆಯ, ರಾಚಪ್ಪ ಅವರ ಮನೆಯ ಪರಿಸ್ಥಿತಿ ತೀವ್ರ ಕಷ್ಟದಲ್ಲಿರುವುದನ್ನು ಗಮನಿಸುತ್ತಾರೆ. ಆ ವಿಚಾರವನ್ನು ಹರ್ಷವರ್ಧನ್ ಗೌಡ ಅವರಿಗೆ ತಿಳಿಸುತ್ತಾರೆ. ನಂತರ ಹರ್ಷವರ್ಧನ್ ಅಷ್ಟು ಹಣವನ್ನು ಅವರಿಗೆ ನೀಡು, ಕಷ್ಟದಲ್ಲಿರುವ ಅವರಿಗೆ ನಮ್ಮ ಕೈಲಾದ ಸಹಾಯವನ್ನು ಮಾಡಿದಂತಾಗುತ್ತದೆ ಎಂದು ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಅವರು ಹೇಳಿದಂತೆ ಹರ್ಷವರ್ಧನ್ ಸ್ನೇಹಿತ ಅಷ್ಟು ಹಣವನ್ನು ಪುನಃ ರಾಚಪ್ಪ ಅವರ ಕೈಯಲ್ಲಿಡುತ್ತಾರೆ. ಹಣ ಪಡೆದ ರಾಚಪ್ಪ ಹರ್ಷವರ್ಧನ್ ಅವರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸುತ್ತಾರೆ. ಈ ಕೊರೊನಾ ಸಮಯದಲ್ಲಿ ಬಡಕುಟುಂಬಕ್ಕೆ ಆಸರೆಯಾದ ಹರ್ಷವರ್ಧನ್ ಗೌಡ ಅವರ ಕಾರ್ಯ ನಿಜಕ್ಕೂ ಮೆಚ್ಚುವಂತಿದೆ.