ಮೈಸೂರು: ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು-ಹುಣಸೂರು ರಸ್ತೆಯ ಬಿಳಿಕೆರೆ ಬಳಿಯ ಹೊಸಲು ಮಾರಮ್ಮ ದೇವಸ್ಥಾನದ ತಿರುವಿನಲ್ಲಿ ನಡೆದಿದೆ. ಬೈಲುಕುಪ್ಪೆ ಮೂಲದ ವಿನಯ್ ಕುಮಾರ್(26) ಹಾಗೂ ಮೋಹನ್ ಮೃತಪಟ್ಟವರು. ಇವರು ಸಂಬಂಧದಲ್ಲಿ ಮಾವ-ಅಳಿಯ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೈಸೂರಿನಿಂದ ಕಾರಿನಲ್ಲಿ ಅಳಿಯ ವಿನಯ್ ಕುಮಾರ, ಮಾವ ಮೋಹನ್ ಬೈಲುಕುಪ್ಪೆಗೆ ತೆರಳುತ್ತಿದ್ದರು. ಮಡಿಕೇರಿ ಕಡೆಯಿಂದ ಕಾರಿನಲ್ಲಿ ಗಂಡ, ಹೆಂಡತಿ ಹಾಗೂ ಒಂದು ಮಗು ಬರುತ್ತಿದ್ದರು. ಈ ಎರಡು ಕಾರುಗಳ ನಡುವೆ ಬಿಳಿಕೆರೆ ಬಳಿ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ಅಳಿಯ, ಮಾವ ಸಾವನ್ನಪ್ಪಿದ್ದಾರೆ. ಇನ್ನೊಂದು ಕಾರಿನಲ್ಲಿದ್ದ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಬಿಳಿಕೆರೆ ಪೊಲೀಸರು ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ, ತನಿಖೆ ಕೈಗೊಂಡಿದ್ದಾರೆ.
(ಇದನ್ನೂ ಓದಿ: ರಷ್ಯಾದ ರಾಕೆಟ್ ದಾಳಿಗೆ ಉಕ್ರೇನ್ನಲ್ಲಿ 15 ಜನ ಹತ: ರಷ್ಯಾದಿಂದ ಭಯೋತ್ಪಾದನೆ ಎಂದು ಕೀವ್ ಆಕ್ರೋಶ)