ಮೈಸೂರು: ಪ್ರಿಯಕರನ ಜೊತೆಗೂಡಿ ಪತಿಯನ್ನೇ ಕೊಲೆ ಮಾಡಿ ಕಟ್ಟು ಕತೆ ಕಟ್ಟಿದ್ದ ಚಾಲಾಕಿ ಹೆಂಡತಿಯ ಬಣ್ಣ ಬಯಲು ಮಾಡುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬನ್ನೂರು ಪೊಲೀಸ್ ಠಾಣೆ ಪೊಲೀಸರು ಈ ಕೊಲೆ ರಹಸ್ಯವನ್ನು ಭೇದಿಸಿದ್ದಾರೆ.
ವೆಂಕಟರಾಜು ಕೊಲೆಯಾದ ವ್ಯಕ್ತಿ. ಈ ಪ್ರಕರಣಕ್ಕೆ ವಿವಾಹೇತರ ಸಂಬಂಧ ಕಾರಣ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆಗೈದಿರುವುದಾಗಿ ಸ್ವತಃ ಹೆಂಡತಿ ಒಪ್ಪಿಕೊಂಡಿದ್ದಾಳೆ. ಸದ್ಯ ಆರೋಪಿಗಳು ಜೈಲು ಸೇರಿದ್ದಾರೆ.
ಪ್ರಕರಣ ಹಿನ್ನೆಲೆ..
ವೆಂಕಟರಾಜು ಎಂಬುವರು ಕಳೆದ 10 ವರ್ಷಗಳ ಹಿಂದೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಳ್ಳೇಕರೆ ಗ್ರಾಮದ ಉಮಾ ಎಂಬುವರನ್ನು ವಿವಾಹವಾಗಿದ್ದರು. ದಂಪತಿಗೆ 8 ವರ್ಷದ ಹೆಣ್ಣು ಮಗು ಮತ್ತು 6 ವರ್ಷದ ಗಂಡು ಮಗು ಇದೆ.
ಕಳೆದ 4 ವರ್ಷಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಭಾಮೈದುರಾದ ವಿನೋದ ಮತ್ತು ಪ್ರಮೋದ ಎಂಬುವರು ವೆಂಕಟರಾಜು ಅವರ ಮೇಲೆ ದೈಹಿಕ ಹಲ್ಲೆ ನಡೆಸಿರುತ್ತಾರೆ. ಆದ ಕಾರಣ ವೆಂಕಟರಾಜು ಅವರು ಹೆಂಡತಿಯ ತವರು ಮನೆಗೆ ಹೋಗಿತ್ತಿರಲಿಲ್ಲ. ಈ ದಂಪತಿಯ ವೈವಾಹಿಕ ಜೀವನ ಅಷ್ಟೇನು ಚೆನ್ನಾಗಿರಲಿಲ್ಲ. ಇದಕ್ಕೆ ಕಾರಣ ವೆಂಕಟರಾಜು ಹಾಗೂ ಉಮಾ ನಡುವೆ 20 ವರ್ಷ ವಯಸ್ಸಿನ ಅಂತರವಿತ್ತು. ಇದರಿಂದಾಗಿ ಆಗಾಗ್ಗೆ ಇಬ್ಬರ ಮಧ್ಯೆ ಜಗಳಗಳು ನಡೆಯುತ್ತಿದ್ದವಂತೆ.
ಕಳೆದ ವರ್ಷ ಅಕ್ಟೋಬರ್ 9 ರಂದು ವೆಂಕಟರಾಜು ಅವರು ತನ್ನ ಪತ್ನಿಯ ಅಜ್ಜಿಯ ಊರಾದ ಟಿ.ನರಸಿಪುರ ತಾಲೂಕಿನ ಹುಣಸಗಳ್ಳಿ ಗ್ರಾಮಕ್ಕೆ ಹೋಗುವುದಾಗಿ ತನ್ನ ಕಿರಿಯ ಸಹೋದರ ರಾಜೇಶ್ಗೆ ಕರೆ ಮಾಡಿ ತಿಳಿಸಿರುತ್ತಾರೆ. ಅದೇ ದಿನ ರಾತ್ರಿ 10:30 ಕ್ಕೆ ಭಾಮೈದನಾದ ವಿನೋದ್, ವೆಂಕಟರಾಜು ಸಹೋದನಾದ ಹೆಚ್.ಟಿ. ರವೀಂದ್ರಗೆ ಫೋನ್ ಮಾಡಿ ವೆಂಕಟರಾಜು ಅವರಿಗೆ ತಲೆ ಸುತ್ತು ಬಂದಿದೆ ಎಂದು ಫೋನ್ ಮಾಡಿದ್ದಾರೆ.
ಇದಾದ ಕೆಲ ಗಂಟೆಗಳಲ್ಲಿ ವೆಂಕಟರಾಜು ಮೃತಪಟ್ಟಿರುವುದಾಗಿ ರವೀಂದ್ರ ಅವರಿಗೆ ತಿಳಿಸುತ್ತಾರೆ. ಈ ಸಾವಿನ ಬಗ್ಗೆ ಅನುಮಾನಗೊಂಡ ರವೀಂದ್ರ ಅಕ್ಟೋಬರ್ 10- 2020 ರಂದು ಬನ್ನೂರು ಪೊಲೀಸ್ ಠಾಣೆಗೆ ದೂರ ನೀಡುತ್ತಾರೆ. ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸ್ ತಂಡಕ್ಕೆ ಅಚ್ಚರಿಯ ಪ್ರೇಮ್ ಕಹಾನಿ ತಿಳಿದಿತ್ತು. ವೆಂಕಟರಾಜು ಅವರ ಪತ್ನಿ ಉಮಾ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಬಿದ್ದಿದೆ.
ಕೊಲೆಯ ಸಂಚು ರೂಪಿಸಿದ್ದು ಹೇಗೆ..?
ಉಮಾ ತನ್ನ 2ನೇ ಮಗುವಿನ ಬಾಣತನಕ್ಕೆ ಎಂದು ತವರು ಮನೆಗೆ ಹೋಗಿದ್ದಳು. ಅಲ್ಲಿ ಪಕ್ಕದ ಮನೆಯ ನಿವಾಸಿ ಅವಿನಾಶ್ (25) ಜೊತೆ ವಿವಾಹೇತರ ಸಂಬಂಧ ಹೊಂದಿರುತ್ತಾಳೆ. ವೆಂಕಟರಾಜು ಅವರು ಮಂಡ್ಯದಲ್ಲಿ ಬೇರೆ ಮನೆ ಮಾಡುತ್ತೇನೆ ಎಂದು ಹೇಳಿದಾಗ, ಅಲ್ಲಿಗೆ ಹೋಗದೆ ತವರು ಮನೆಯಲ್ಲೇ ಉಳಿದುಕೊಳ್ಳುತ್ತಾಳೆ. ನಂತರ ತನ್ನ ಪ್ರಿಯಕರನ ಜೊತೆ ಸೇರಿ ಉಮಾ ತನ್ನ ಗಂಡನನ್ನೇ ಮುಗಿಸುವ ಸಂಚನ್ನು ರೂಪಿಸುತ್ತಾಳೆ.
ಅದರಂತೆಯೇ ಅಕ್ಟೋಬರ್ 9 ರಂದು ಉಮಾ ತನ್ನ ಪತಿಯನ್ನು ಹುಣಸಗಳ್ಳಿ ಗ್ರಾಮದ ತಮ್ಮ ಅಜ್ಜಿ ಮನೆಗೆ ಕರೆಸಿದ್ದಾಳೆ. ಆಗ ಕಾಫಿಯಲ್ಲಿ ನಿದ್ರೆ ಮಾತ್ರೆ ಹಾಕಿ ನಂತರ ಮುಖಕ್ಕೆ ದಿಂಬು ಇಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಅಲ್ಲದೆ, ಅನುಮಾನ ಬರಬಾರದೆಂದು ಸ್ವಾಭಾವಿಕ ಸಾವು ಎಂದು ವೆಂಕಟರಾಜು ಸಹೋದರನಿಗೆ ಫೋನ್ನಲ್ಲಿ ತಿಳಿಸಿದ್ದರು.
ಕಳೆದ ವರ್ಷ ಅಕ್ಟೋಬರ್ನಲ್ಲಿ ನಡೆದ ಈ ಪ್ರಕರಣವು ಸುಮಾರು 8 ತಿಂಗಳ ನಿರಂತರ ತನಿಖೆ ಮತ್ತು ವೈದ್ಯಕೀಯ ಪರೀಕ್ಷೆಯ ನಂತರ ಇದು ಸ್ವಾಭಾವಿಕ ಸಾವಲ್ಲ, ಕೊಲೆ ಎಂಬುದು ದೃಢಪಟ್ಟಿದೆ ಎಂದು ಎಸ್ಪಿ ಚೇತನ್ ಅವರು ಕೇಸ್ ಬಗ್ಗೆ ಮಾಹಿತಿ ನೀಡಿದ್ದಾರೆ.