ಮಂಗಳೂರು: ನ್ಯಾಯಾಲಯದಿಂದ ಬಂದ ನೋಟಿಸನ್ನು ಸರಿಯಾಗಿ ಗಮನಿಸದೆ 'ಬಿಡುಗಡೆ ಆದೇಶ' ಎಂದು ತಪ್ಪಾಗಿ ಗ್ರಹಿಸಿ, ಇಬ್ಬರು ಕೊಲೆ ಆರೋಪಿಗಳನ್ನು ಜಿಲ್ಲಾ ಕಾರಾಗೃಹ ಅಧಿಕಾರಿಗಳು ಬಿಡುಗಡೆ ಮಾಡಿ, ಬಳಿಕ ವಿಷಯ ತಿಳಿದು ಮರು ಬಂಧನಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಬಿಕರ್ಣಕಟ್ಟೆ ಕಂಡೆಟ್ಟು ನಿವಾಸಿ ಜಗದೀಶ್ ಹಾಗೂ ಕದ್ರಿಯ ಜಾರ್ಜ್ ಮಾರ್ಟಿಸ್ ರಸ್ತೆಯ ನಿವಾಸಿ ಶಿವಾಜಿ ಎಂಬವರು ಬಿಡುಗಡೆಗೊಂಡ ಆರೋಪಿಗಳು. ಇವರಿಬ್ಬರು ಮೇ15, 2016ರಂದು ಬಿಜೈ ಬಳಿಯಲ್ಲಿ ನಡೆದ ರೋಹಿತ್ ಕೋಟ್ಯಾನ್ ಕೊಲೆ ಪ್ರಕರಣದ ಆರೋಪಿಗಳಾಗಿ ಜೈಲು ಸೇರಿದ್ದರು. ಈ ಇಬ್ಬರೂ ಆರೋಪಿಗಳ ಹೆಸರಿನಲ್ಲಿ ನ್ಯಾಯಾಲಯದಿಂದ ನೋಟಿಸ್ ಬಂದಿದ್ದು, ಇದನ್ನು ಜಾಮೀನು ನೋಟೀಸ್ ಎಂದು ತಪ್ಪು ತಿಳಿದುಕೊಂಡ ಜೈಲರ್, ಜೈಲು ಅಧೀಕ್ಷಕರ ಅನುಮತಿ ಪಡೆದು ಜು.9 ರಂದು ಬಿಡುಗಡೆ ಮಾಡಿದ್ದರು.
ಅಲ್ಲದೆ, ಜೈಲಿನ ಎಲ್ಲಾ ದಾಖಲಾತಿ ಪ್ರಕ್ರಿಯೆಗಳನ್ನು ಕ್ರಮಬದ್ಧವಾಗಿ ನಮೂದಿಸಿ, ಜಾಮೀನು ನಿಯಮಗಳ ಪ್ರಕಾರವೇ ಆರೋಪಿಗಳನ್ನು ಬಿಡುಗಡೆ ಮಾಡಲಾಗಿತ್ತು. ಬಳಿಕ ಆರೋಪಿಗಳು ತಮ್ಮ ವಕೀಲರ ಬಳಿ ಹೋದಾಗ ವಕೀಲರಿಗೆ ಈ ಎಡವಟ್ಟಿನ ಬಗ್ಗೆ ತಿಳಿದು ಬಂದಿದೆ. ಬಳಿಕ ವಕೀಲರು ಆರೋಪಿಗಳು ಬಿಡುಗಡೆಯಾಗಿರುವ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ, ಜೈಲು ಅಧಿಕಾರಿಗಳು ಆರೋಪಿಗಳ ಮನೆಗೆ ತೆರಳಿ ಮರು ಬಂಧನ ಮಾಡಿ, ಜೈಲಿಗೆ ಕರೆತಂದಿದ್ದಾರೆ.