ಮಂಗಳೂರು: ಮುಂಗಾರು ಪ್ರವೇಶವಾದ ಎರಡು ದಿನದಲ್ಲೇ ಉಳ್ಳಾಲದಲ್ಲಿ ಸಮುದ್ರ ತೀವ್ರವಾಗಿ ಪ್ರಕ್ಷುಬ್ಧಗೊಂಡು ಕಡಲ್ಕೊರೆತ ಆರಂಭವಾಗಿದೆ. ಸಮುದ್ರ ತೀರದಲ್ಲಿರುವ ಸುಮಾರು 50 ಕ್ಕೂ ಹೆಚ್ಚು ಮನೆಗಳು ಅಪಾಯಕ್ಕೆ ಸಿಲುಕಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.
ಉಳ್ಳಾಲ ವ್ಯಾಪ್ತಿಯ ಮೊಗವೀರಪಟ್ಣ ಮತ್ತು ಉಳ್ಳಾಲಕೋಡಿ ಸಂಪರ್ಕಿಸುವ ಕೈಕೊ, ಕಿಲೇರಿಯಾ ನಗರ ಸೀಗ್ರೌಂಡ್ ಪ್ರದೇಶಗಳಲ್ಲಿರುವ ಸಮುದ್ರಕ್ಕೆ ಸನಿಹದಲ್ಲಿರುವ ಮನೆಗಳು, ಕಡಲ್ಕೊರೆತದ ಭೀತಿಯಲ್ಲಿವೆ. ಸಮುದ್ರದ ಮೊರೆತವೂ ಅತಿಯಾಗಿದ್ದು, ಇಲ್ಲಿನ ಹಲವಾರು ಮನೆಗಳು ಹಾಗೂ ಮಸೀದಿಗಳ ಗೋಡೆಗಳಿಗೆ ಬೃಹತ್ ಗಾತ್ರದ ಸಮುದ್ರದಲೆಗಳು ಬಡಿಯುತ್ತಿವೆ.
ಕೈಕೊ ಹಾಗೂ ಕಿಲೇರಿಯಾ ನಗರದಲ್ಲಿ ಸಮುದ್ರದ ಅಲೆಗಳ ರಭಸಕ್ಕೆ ತಡೆಗೋಡೆಗಳ ಕಲ್ಲುಗಳು ಕೊಚ್ಚಿಹೋಗಿವೆ. ಜೆಸಿಬಿ ಮುಖಾಂತರ ತಡೆಗೋಡೆಗೆ ಬೃಹತ್ ಗಾತ್ರದ ಕಲ್ಲುಗಳನ್ನು ಹಾಕಿ ಸಮುದ್ರದ ಅಲೆಗಳಿಂದ ತೀರದಲ್ಲಿರುವ ಮನೆಗಳನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.
ಈ ಸಂದರ್ಭ ಸ್ಥಳೀಯ ನಗರಸಭೆ ಸದಸ್ಯ ಬಶೀರ್ ಹುಸೈನ್ ಮಾತನಾಡಿ, ಮೇ ನಿಂದ ಜೂನ್ವರೆಗೆ, ಇಲ್ಲಿ ಪ್ರತೀ ವರ್ಷ ಕಡಲಕೊರೆತ ನಡೆಯುತ್ತದೆ. ಈ ವರ್ಷ ಕಡಲು ಕೊರೆತ ಜೋರಾಗಿದ್ದು, ಸಚಿವ ಯು ಟಿ ಖಾದರ್ ತಾತ್ಕಾಲಿಕ ತಡೆಗೋಡೆಯ ಕಾಮಗಾರಿಗೆ ವ್ಯವಸ್ಥೆ ಮಾಡಿಸಿದ್ದಾರೆ. ಕೈಕೋ ನಗರದಲ್ಲಿನ ಅಪಾಯದಲ್ಲಿರುವ 100 ಮೀಟರ್ ಹಾಗೂ ಕಿಲೇರಿಯಾದಲ್ಲಿ 200 ಮೀಟರ್ ಪ್ರದೇಶದಲ್ಲಿ ತಾತ್ಕಾಲಿಕ ತಡೆಗೋಡೆಗೆ ಕಲ್ಲು ಹಾಕುವ ಕಾರ್ಯ ನಡೆಸಲಾಗುತ್ತದೆ. ಅಲ್ಲದೆ ಶಾಶ್ವತ ಪರಿಹಾರಕ್ಕೆ ಆಗಸ್ಟ್ ನಂತರ ಎಡಿಪಿ ಕೆಲಸ ಆರಂಭವಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದರು.