ಮಂಗಳೂರು: ಶ್ರೀರಕ್ಷಾ ಬೋಟ್ ದುರಂತದಲ್ಲಿ ನಾಪತ್ತೆಯಾದ ಅನ್ವರ್ ಮೃತದೇಹ ನಾಲ್ಕನೇ ದಿನವೂ ಪತ್ತೆಯಾಗಿಲ್ಲ.
ಸೋಮವಾರ ಮೀನುಗಾರಿಕೆಗೆ ತೆರಳಿದ್ದ ಶ್ರೀರಕ್ಷಾ ಬೋಟ್ ಸಮುದ್ರದಲ್ಲಿ ದುರಂತಕ್ಕೀಡಾಗಿ ಆರು ಮಂದಿ ಸಮುದ್ರಪಾಲಾಗಿದ್ದರು. ಇದರಲ್ಲಿ ಐದು ಮಂದಿಯ ಶವ ಪತ್ತೆಯಾಗಿತ್ತು. ಮೀನುಗಾರ ಅನ್ವರ್ ಮೃತದೇಹ ಪತ್ತೆ ಹಚ್ಚಿ ಮೇಲೆ ತರುವ ವೇಳೆ ಮುಳುಗು ತಜ್ಞರ ಕೈಜಾರಿ ಸಮುದ್ರದಾಳ ಸೇರಿತ್ತು.
ಆ ಬಳಿಕ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಇಂದು ಎರಡು ಬೋಟ್ಗಳಲ್ಲಿ ತೆರಳಿದ್ದ ಮೀನುಗಾರರು, ಮುಳುಗು ತಜ್ಞರು ದಿನವಿಡೀ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ಇಂದು ಇಡೀ ದಿನ ಮೃತದೇಹಕ್ಕಾಗಿ ಕಾರ್ಯಾಚರಣೆ ನಡೆಸಿದರೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ನಾಳೆಯೂ ಶೋಧ ಕಾರ್ಯ ಮುಂದುವರೆಯಲಿದೆ. ಮೃತದೇಹ ಕಡಲ ತೀರಕ್ಕೆ ಬರುವ ಸಾಧ್ಯತೆ ಇರುವುದರಿಂದ ಗಸ್ತು ತಿರುಗಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.