ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಕೈ ಆಪ್ತವಲಯದಲ್ಲಿಯೇ ಅಸಮಾಧಾನ ಎದ್ದಿದೆ.
ಕಲಘಟಗಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ನಲ್ಲಿ ಎರಡು ಬಣಗಳಾಗಿದ್ದು, ಒಂದು ಸಂತೋಷ್ ಲಾಡ್ ಬಣ, ಇನ್ನೊಂದು ನಾಗರಾಜ್ ಛಬ್ಬಿ ಬಣಗಳಾಗಿವೆ ಎಂಬ ಅನುಮಾನ ಕಾಡತೊಡಗಿದೆ.
ಕಲಘಟಗಿ ವಿಧಾನಸಭೆ ಕ್ಷೇತ್ರಕ್ಕೆ ಮಾಜಿ ಸಚಿವ ಸಂತೋಷ್ ಲಾಡ್ ಬರಬಾರದು ಎಂದು ಒತ್ತಾಯಿಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಮುಂದಿನ ಚುನಾವಣೆಗೆ ಲಾಡ್ಗೆ ಟಿಕೆಟ್ ನೀಡಬಾರದು, ನಾಗರಾಜ್ ಛಬ್ಬಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇನ್ನೊಂದೆಡೆ ಕಳೆದ ನಾಲ್ಕು ದಿನಗಳಿಂದ ಮಾಜಿ ಸಚಿವ ಸಂತೋಷ್ ಲಾಡ್ ಕ್ಷೇತ್ರದಲ್ಲಿ ಸಂಚಾರ ನಡೆಸಿದ್ದು, ಲಾಡ್ ಕಲಘಟಗಿ ವಿಧಾನಸಭೆ ಕ್ಷೇತ್ರಕ್ಕೆ ಮನಸ್ಸಿಗೆ ಬಂದಾಗ ಬರ್ತಾರೆ. ಆದ್ದರಿಂದ ಅವರಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮತ್ತು ಕ್ಷೇತ್ರ ಅಭಿವೃದ್ಧಿ ಆಗುವುದಿಲ್ಲ ಎಂಬುವಂತ ಮಾತುಗಳು ಕೂಡ ಕಾರ್ಯಕರ್ತರಲ್ಲಿ ಕೇಳಿಬರುತ್ತಿವೆ.
ಇದೇ ಕಾರಣಕ್ಕೆ ಕಳೆದ ಚುನಾವಣೆಯಲ್ಲಿ ಲಾಡ್ ಪರಾಭವಗೊಂಡಿದ್ದಾರೆ. ಇದರಿಂದಾಗಿ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಹೈಕಮಾಂಡಗೆ ಮನವಿ ಮಾಡಿ, ಕಾಂಗ್ರೆಸ್ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಕಾರ್ಯಕರ್ತರು ಕಮೆಂಟ್ ಮಾಡಿದ್ದಾರೆ.