ಹುಬ್ಬಳ್ಳಿ: ನಗರದಿಂದ ರಾಜಸ್ಥಾನಕ್ಕೆ ತೆರಳಲು 1,452 ವಲಸೆ ಕಾರ್ಮಿಕರಿಗೆ ಸರ್ಕಾರ ರೈಲು ವ್ಯವಸ್ಥೆ ಕಲ್ಪಿಸಿದ್ದು,ಹುಬ್ಬಳ್ಳಿ-ಜೋಧ್ಪುರ ಮಧ್ಯೆ 2 ಸಾರಿ ಶ್ರಮಿಕ ಎಕ್ಸ್ಪ್ರೆಸ್ ರೈಲು ಸಂಚಾರ ಮಾಡಲಿದೆ.
ಇಂದು ಮತ್ತು ನಾಳೆ ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿಯಿಂದ ಈ ರೈಲು ಹೊರಡಲಿದೆ. ಇಲ್ಲಿಂದ ಹೊರಟ ಮಾರನೇ ದಿನ ಮಧ್ಯಾಹ್ನ 2.30ಕ್ಕೆ ಜೋಧ್ಪುರ ತಲುಪಲಿದೆ. ಮೇ 14 ಮತ್ತು 15ರಂದು ಸಂಜೆ 6 ಗಂಟೆಗೆ ಜೋಧ್ಪುರದಿಂದ ಹೊರಟು, ಮಾರನೇ ದಿನ ರಾತ್ರಿ 11.55ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ.
ಮೀರಜ್, ಪುಣೆ, ವಾಸಾಯಿ ರೋಡ, ವಡೋದರಾ, ಪಾಲಂಪುರ ಮಾರ್ಗ ಮೂಲಕ ಸಂಚರಿಸಲಿದೆ. ಹುಬ್ಬಳ್ಳಿಯಿಂದ ರಾಜಸ್ಥಾನಕ್ಕೆ ತೆರಳಲು ಜಿಲ್ಲಾಡಳಿತದ ಬಳಿ ಈಗಾಗಲೇ 1,452 ಜನ ಹೆಸರು ನೋಂದಾಯಿಸಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯಿಂದ ಎಲ್ಲಾ ಶ್ರಮಿಕ ವರ್ಗದವರ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ನಡೆದಿದೆ. ಇದಕ್ಕಾಗಿ ಪಾರ್ಕಿಂಗ್ ಪ್ರದೇಶದಲ್ಲಿ 15 ಕೌಂಟರ್ ತೆರೆಯಲಾಗಿದೆ. ಆರೋಗ್ಯದ ವರದಿಯನ್ನು ನೋಂದಾಯಿತ ಗುರುತಿನ ಸಂಖ್ಯೆಯಡಿ ದಾಖಲಿಸಲಾಗುತ್ತದೆ.
ವಲಸೆ ಕಾರ್ಮಿಕ ರಾಜಸ್ಥಾನಕ್ಕೆ ತೆರಳಿದ ನಂತರ ಯಾರಿಗಾದರೂ ಕೊರೊನಾ ಸೋಂಕು ಪಾಸಿಟಿವ್ ಕಂಡುಬಂದಲ್ಲಿ ಈ ಗುರುತಿನ ಸಂಖ್ಯೆಯ ಸಹಾಯದಿಂದ ಆತನ ಟ್ರಾವಲ್ ಹಿಸ್ಟರಿ ಕಂಡುಹಿಡಿಯಲು ಸಹಾಯವಾಗಲಿದೆ. ತಪಾಸಣೆ ವೇಳೆ ಆರೋಗ್ಯ ಸ್ಥಿತಿಯಲ್ಲಿ ವ್ಯತ್ಯಾಸ ಕಂಡುಬರುವ ಕಾರ್ಮಿಕರ ಪ್ರವಾಸ ರದ್ದು ಮಾಡಲಾಗುತ್ತದೆ. 24 ಬೋಗಿ ಹೊಂದಿರುವ ಶ್ರಮಿಕ್ ಎಕ್ಸ್ಪ್ರೆಸ್ ರೈಲು ಇದಾಗಿದ್ದು,18 ಬೋಗಿಗಳಲ್ಲಿ ತಲಾ 72 ಜನರು ಪ್ರಯಾಣಿಸಲಿದ್ದಾರೆ. 4 ಬೋಗಿಗಳಲ್ಲಿ ತಲಾ 38 ಜನರು ಹಾಗೂ ರೈಲ್ವೆ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ಇರಲಿದ್ದಾರೆ.
ಇನ್ನುಳಿದ 2 ಬೋಗಿಗಳನ್ನ ಮೀಸಲು ಸ್ಥಿತಿಯಲ್ಲಿ ಇಡಲಾಗಿದೆ. ಒಂದು ವೇಳೆ ಇನ್ನೂ ಹೆಚ್ಚಿನ ಪ್ರಯಾಣಿಕರು ಕೊನೆ ಕ್ಷಣದಲ್ಲಿ ಬಂದಲ್ಲಿ, ಮೀಸಲಿಟ್ಟಿರುವ ಈ ಬೋಗಿಗಳಲ್ಲಿ ಅವಕಾಶ ನೀಡಲಾಗುತ್ತದೆ. ಅದರ ಜೊತೆಗೆ ಪ್ರಯಾಣಿಕರಿಗೆ ತೊಂದರೆ ಆಗದಂತೆ ಊಟೋಪಚಾರದ ವ್ಯವಸ್ಥೆಯನ್ನ ಜಿಲ್ಲಾಡಳಿತ ಮಾಡಿಕೊಂಡಿದೆ.