ಧಾರವಾಡ: ಭಾರತೀಯ ಕೃಷಿ ಉತ್ಪನ್ನಗಳಿಗೆ ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಇರುವ ಬೇಡಿಕೆ ಗುರುತಿಸಿ, ಅವುಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸಲು ಕೇಂದ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಕೃಷಿ ವಿಶ್ವವಿದ್ಯಾಲಯದ 35ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ವಿಶ್ವವಿದ್ಯಾಲಯಗಳು, ತಜ್ಞರು ಹಾಗೂ ಸರ್ಕಾರಗಳು ಜೊತೆ ಸೇರಿ ವಿವಿಧ ದೇಶಗಳಲ್ಲಿನ ಬೇಡಿಕೆ ಆಧರಿಸಿ ಅಂತಹ ಉತ್ಪನ್ನಗಳನ್ನು ಬೆಳೆಯಲು ಸಮನ್ವಯದ ಯೋಜನೆ, ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದರು.
ಕೃಷಿ ಕ್ಷೇತ್ರದ ವಾಸ್ತವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಕೃಷಿ ಉತ್ಪನ್ನಗಳ ಪ್ರಮಾಣ ಹೆಚ್ಚಾಗುತ್ತಿದೆಯಾದರೂ ದೇಶದ ಜಿಡಿಪಿಗೆ ಅದರ ಕೊಡುಗೆ ಶೇ.14-15 ಕ್ಕೆ ಇಳಿದಿದೆ. ಇದಕ್ಕೆ ಕಾರಣವಾದ ಅಂಶಗಳನ್ನು ಗುರುತಿಸಿ ಪರಿಹಾರ ಕಂಡು ಹಿಡಿಯಬೇಕು. ಕೃಷಿ ಸಮ್ಮಾನ ಯೋಜನೆ ಶೀಥಲೀಕರಣ ಘಟಕಗಳ ನಿರ್ಮಾಣ, ಬೇಡಿಕೆ-ಸರಬರಾಜು ಸರಪಳಿ ನಿರ್ವಹಣೆಗೆ ಸರ್ಕಾರ ಒತ್ತು ನೀಡಿದೆ. ಕೃಷಿ ಉದ್ಯಮಶೀಲತೆ ಬೆಳೆಸಲು ಸ್ಟಾರ್ಟ್ಅಪ್ಗಳ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ. ಆಹಾರ ಸಂಸ್ಕರಣೆ, ಸಣ್ಣ ಆಹಾರ ಘಟಕಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ಕೃಷಿಕರ ಆದಾಯ ದ್ವಿಗುಣಗೊಳಿಸಲು, ಹೈನುಗಾರಿಕೆ, ಮೀನುಗಾರಿಕೆ, ಜೇನು ಸಾಕಾಣಿಕೆಯಂತಹ ಉಪಕಸಬುಗಳು ಅಗತ್ಯ ಎಂದು ತಿಳಿಸಿದರು.
ಮೀನುಗಾರಿಕೆ ಉತ್ತೇಜನಕ್ಕೆ 20 ಸಾವಿರ ಕೋಟಿ ರೂ. ಕಾಲುಬಾಯಿ ರೋಗ ನಿಯಂತ್ರಣಕ್ಕೆ 13 ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಜೆಟ್ನಲ್ಲಿ ಮೀಸಲಿಟ್ಟಿದೆ. ಕೃಷಿ ಹಾಗೂ ತೋಟಗಾರಿಕೆ ಉತ್ಪಾದನೆಯ ಪ್ರಮಾಣದಲ್ಲಿ ಗಮನಾರ್ಹ ಹೆಚ್ಚಳವಾಗಿದೆ. 5.2 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಅಕ್ಕಿಯನ್ನು ರಫ್ತು ಮಾಡಲಾಗುತ್ತಿದೆ. ಅಕ್ಕಿ ರಫ್ತು ಮಾಡುತ್ತಿರುವ ದೇಶಗಳಲ್ಲಿ ಭಾರತವು ಜಗತ್ತಿನಲ್ಲಿಯೇ ಮೊದಲ ಸ್ಥಾನದಲ್ಲಿದೆ. ಸಹಕಾರ ರಂಗದ ಕೃಷಿಗೆ ಪ್ರೋತ್ಸಾಹಿಸಲಾಗುತ್ತಿದೆ. ರಸಾಯನಿಕಗಳ ಬಳಕೆಯ ಪ್ರಮಾಣ ಕಡಿಮೆಗೊಳಿಸಬೇಕು. ಬೆಂಬಲ ಬೆಲೆ ಯೋಜನೆಗೆ ಯಾವುದೇ ಧಕ್ಕೆ ಇಲ್ಲ ಎಂದರು.
'ರೈತರ ಆದಾಯ ದ್ವಿಗುಣಗೊಳಿಸಲು ಪ್ರಮಾಣಿಕವಾಗಿ ಪ್ರಯತ್ನ':
ಕೃಷಿಕರ ಉತ್ಪನ್ನಗಳಿಗೆ ಬ್ರಾಂಡಿಂಗ್ ಮಾಡಿ ಆಹಾರ ಸಂಸ್ಕರಣೆಯ ಕೌಶಲಗಳನ್ನು ಕಲಿಸಿ ರೈತರ ಆದಾಯವನ್ನು ದ್ವಿಗುಣಗೊಳಿಸಬೇಕು ಎಂಬ ಪ್ರಧಾನ ಮಂತ್ರಿಯವರ ಸಂಕಲ್ಪದ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಕೃಷಿ ಸಚಿವ, ಕೃಷಿ ವಿ.ವಿ. ಸಹಕುಲಾಧಿಪತಿ ಬಿ.ಸಿ.ಪಾಟೀಲ ಹೇಳಿದರು.
ದೇಶದಲ್ಲಿ ಕೃಷಿ ಬೆಳೆಯುತ್ತಿದೆ. ಕೃಷಿಕ ಬೆಳೆಯುತ್ತಿಲ್ಲ. ಕೃಷಿ ಕ್ಷೇತ್ರ ನಾಶವಾದರೆ ದುರ್ಭಿಕ್ಷೆ ಬಂದೊದಗುತ್ತದೆ. ಕೃಷಿ ಪದವೀಧರರು ಉದ್ಯೋಗಕ್ಕಾಗಿ ಎದುರು ನೋಡಬಾರದು. ಮತ್ತೊಬ್ಬರಿಗೆ ಉದ್ಯೋಗ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಕೃಷಿ ವಿ.ವಿ.ಯ ಪ್ರಾಧ್ಯಾಪಕರು ಪ್ರತಿಯೊಂದು ತಾಲೂಕಿಗೆ ನೋಡಲ್ ಅಧಿಕಾರಿಯಾಗಿ ನೇಮಕಗೊಂಡು ಜ್ಞಾನವನ್ನು ರೈತರಿಗೆ ಹಂಚಬೇಕು. ಕೃಷಿಕರಿಗೆ ಸಂಶೋಧನೆ, ವೈಜ್ಞಾನಿಕ ಸಲಹೆಗಳನ್ನು ನೀಡಬೇಕು. ಕೃಷಿ ಪದವಿ ಪಡೆದ ಶೇ.14 ರಷ್ಟು ವಿದ್ಯಾರ್ಥಿನಿಯರು ಮಾತ್ರ ಇಂದು ಕಾರ್ಯಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದರು.
ಕೃಷಿ ಕ್ಷೇತ್ರ ಕೆಳ ಮಟ್ಟದ್ದಲ್ಲ, ಅದು ಪ್ರಾಧಾನ್ಯವಾದುದು. ಸಾಫ್ಟವೇರ್, ಹಾರ್ಡ್ವೇರ್ ಕ್ಷೇತ್ರಗಳಿಂದ ಜನರಿಗೆ ಅನ್ನ ನೀಡಲು ಸಾಧ್ಯವಿಲ್ಲ. ಕೃಷಿಕ ಮಾತ್ರ ಜಗತ್ತಿನ ಹಸಿವು ನೀಗಿಸಬಲ್ಲ. ಕೃಷಿ ಶಿಕ್ಷಣದಲ್ಲಿ ರೈತರ ಮಕ್ಕಳಿಗೆ ಮೀಸಲಾತಿ ಪ್ರಮಾಣವನ್ನು ಶೇ.40 ರಿಂದ 50ಕ್ಕೆ ಹೆಚ್ಚಿಸಲು ರೂಪಿಸಿರುವ ಆದೇಶ ಈ ವರ್ಷದಿಂದ ಜಾರಿಗೊಳ್ಳಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರೈತರ ಮಕ್ಕಳ ಶಿಕ್ಷಣ ಪ್ರೋತ್ಸಾಹಿಸಲು ಶಿಷ್ಯವೇತನ ಘೋಷಿಸಿರುವುದು ದೇಶಕ್ಕೆ ಮಾದರಿಯಾಗಿದೆ ಎಂದರು. ಇದೇ ವೇಳೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಅಮೃತ ದೇಸಾಯಿ ಮಾತನಾಡಿದರು.