ಹುಬ್ಬಳ್ಳಿ : ಲಾಕ್ಡೌನ್ನಿಂದಾಗಿ ಸಾರಿಗೆ ಇಲಾಖೆಯ ನಾಲ್ಕು ವಿಭಾಗದಿಂದ 3700 ಕೋಟಿ ರೂ. ನಷ್ಟ ಸಂಭವಿಸಿದೆ. ಇಂತಹ ಸಂದರ್ಭದಲ್ಲಿ ಸಂಸ್ಥೆ 1.30 ಲಕ್ಷ ನೌಕರರಿಗೆ ತೊಂದರೆಯಾಗಬಾರದು ಎಂದು ರಾಜ್ಯ ಸರ್ಕಾರ ಸಾರಿಗೆ ನೌಕರರ ಸಂಬಳಕ್ಕಾಗಿ 1746 ಕೋಟಿ ರೂ. ನೆರವು ನೀಡಿದೆ. ನೌಕರರ ಒಂಬತ್ತು ಬೇಡಿಕೆಗಳನ್ನು ಈಡೇರಿಸಲು ಸಹ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಕಲಘಟಗಿ ನೂತನ ಬಸ್ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಅನೀರಿಕ್ಷಿತ ಕೊರೊನಾ ಲಾಕ್ಡೌನ್ನಿಂದಾಗಿ ಸಾರಿಗೆ ಸಂಸ್ಥೆಯ ನಷ್ಟದ ಪ್ರಮಾಣ ಹೆಚ್ಚಾಗಿದೆ ಎಂದರು.

ಲಾಕ್ಡೌನ್ ನಂತರ ಸಾರಿಗೆ ಸಂಚಾರ ಪುನಃ ಪ್ರಾರಂಭಿಸಲಾಗಿದೆ. ಪ್ರತಿದಿನ 1 ಕೋಟಿ ಜನರು ಪ್ರಯಾಣಿಸುತ್ತಿದ್ದಾರೆ. ಲಾಕ್ಡೌನ್ ಪ್ರಾರಂಭಕ್ಕೂ ಮುನ್ನ 4.20 ಕೋಟಿ ಜನರು ಪ್ರಯಾಣಿಸುತ್ತಿದ್ದರು. ಪ್ರಯಾಣಿಕರ ಸಂಖ್ಯೆ ಇಳಿಕೆಯಿಂದಾಗಿ ಸಾರಿಗೆ ಆದಾಯ ಕುಂಠಿತವಾಗಿದೆ. ಇಲಾಖೆಯಲ್ಲಿ ಪಾರದರ್ಶಕ ಆಡಳಿತ ವ್ಯವಸ್ಥೆ ತರಲಾಗುವುದು ಎಂದು ಸಚಿವ ಸವದಿ ಹೇಳಿದರು.

350 ಎಲೆಕ್ಟ್ರಿಕಲ್ ಬಸ್ ಖರೀದಿಗೆ ಅನುಮೋದನೆ : ಕೇಂದ್ರ ಸರ್ಕಾರ 350 ಎಲೆಕ್ಟ್ರಿಕಲ್ ಬಸ್ ಖರೀದಿಗೆ ಅನುಮೋದಿಸಿ, ಪ್ರತಿ ಬಸ್ಗೆ 55 ಲಕ್ಷ ರೂಪಾಯಿ ಸಬ್ಸಿಡಿ ನೀಡಿದೆ. ಬಸ್ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿದೆ. ಬೆಂಗಳೂರಿಗೆ 300 ಹಾಗೂ ಹುಬ್ಬಳ್ಳಿ-ಧಾರವಾಡ ನಗರಕ್ಕೆ 50 ಎಲೆಕ್ಟ್ರಿಕಲ್ ಬಸ್ಗಳನ್ನು ನೀಡಲಾಗುವುದು.

ಹಳೆ ಬಸ್ಗಳಿಂದ ಸಾರ್ವಜನಿಕ ಶೌಚಾಲಯ ನಿರ್ಮಾಣ : ಸಂಸ್ಥೆಯ 2000 ಬಸ್ಗಳು 9 ಲಕ್ಷ ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಿದ್ದು, ಅವುಗಳನ್ನು ನಿಷ್ಕ್ರಿಯಗೊಳಿಸಲಾಗುವುದು. ಹಳೆ ಬಸ್ಗಳನ್ನು ಗುಜರಿಯವರಿಗೆ ಹರಾಜು ನೀಡದೆ, ಸಾರ್ವಜನಿಕ ಸ್ಥಳಗಳಲ್ಲಿ ಬಸ್ಗಳನ್ನು ಬಳಸಿ ಸುಸಜ್ಜಿತ ಶೌಚಾಲಯ, ಸ್ನಾನ ಗೃಹಗಳನ್ನು ನಿರ್ಮಿಸಲಾಗುವುದು. ಇದರಿಂದ ಹಣದ ಉಳಿತಾಯವಾಗಲಿದೆ. ಶಾಸಕರು ಇಂತಹ ಶೌಚಾಲಯ ನಿರ್ಮಾಣಕ್ಕೆ ಅನುದಾನದಿಂದ ಹೆಚ್ಚಿನ ಹಣ ನೀಡಬೇಕು ಎಂದು ಕೇಳಿಕೊಂಡರು.
ಯಾರದೋ ಮಾತು ಕೇಳಿ ಪ್ರತಿಭಟನೆಗೆ ಇಳಿಯಬಾರದು : ನೌಕರರು ಯಾರದೋ ಮಾತು ಕೇಳಿ ಪ್ರತಿಭಟನೆಗೆ ಇಳಿಯಬಾರದು. ಇಲಾಖೆ ಕಾರ್ಮಿಕರ ಹಿತರಕ್ಷಣೆಗೆ ಬದ್ಧವಾಗಿದೆ. ಅಧಿಕಾರಿಗಳಿಂದ ಕೆಳ ಹಂತದ ನೌಕರರಿಗೆ ಉಂಟಾಗುವ ಕಿರುಕುಳ ತಪ್ಪಿಸಬೇಕು. ವರ್ಗಾವಣೆ ನಿಯಮಗಳನ್ನು ಬದಲಿಸಲಾಗುವುದು. ವಾಕರಸಾ ಸಂಸ್ಥೆ ನಿವೃತ್ತಿ ನೌಕರರ ಉಪದಾನ ನಗದೀಕರಣ ಸೇರಿ ಇತರೆ ಸೌಲಭ್ಯಗಳನ್ನು ನೀಡಲು ಅಲ್ಪಾವಧಿ ಸಾಲ ಪಡೆಯುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವರು ಸೂಚಿಸಿದರು.