ಹರಿಹರ: ಸಮಾಜದ ಅಭಿವೃದ್ಧಿಗಾಗಿ ಭೂಮಿ ಖರೀದಿ ಮಾಡಿರುವುದು ಪ್ರಸನ್ನಾನಂದ ಶ್ರೀಗಳ ಸಮಾಜದ ಅಭಿವೃದ್ಧಿಯ ಕಳಕಳಿ ತೋರಿಸುತ್ತದೆ ಎಂದು ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಶ್ಲಾಘಿಸಿದರು.
ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಪೀಠದ ಆವರಣದಲ್ಲಿ ಹಮ್ಮಿಕೊಂಡಿದ್ದ 2ನೇ ವಾಲ್ಮೀಕಿ ಜಾತ್ರಾ ಮಹೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ನಡೆದ ಧರ್ಮ ಸಭೆಯಲ್ಲಿ ಮಾತನಾಡಿದ ಅವರು, ಪ್ರಸನ್ನಾನಂದ ಮಹಾಸ್ವಾಮೀಜಿ ಮತ್ತು ನಾವು ಜೋಡೆತ್ತುಗಳ ರೀತಿಯಲ್ಲಿ ಸಮಾಜದ ಅಭಿವೃದ್ಧಿ ಮಾಡುತ್ತೇವೆ. ರಾಮನ ಜೊತೆಯಿದ್ದ ಹನುಮಂತನ ರೀತಿಯಲ್ಲಿ ಗುರುಗಳ ಜೊತೆಗೆ ಸದಾ ಇರುತ್ತೇವೆ, ಸಮಾಜದ ಅಭಿವೃದ್ಧಿಗೆ ಭಕ್ತರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಮಾಜದ ಏಳ್ಗೆಗಾಗಿ ಮತ್ತು ಸಮಾಜಕ್ಕೆ ನ್ಯಾಯಯುತ ಸೌಲಭ್ಯ ಸಿಗಲು ಶ್ರೀಗಳು ರಾಜನಹಳ್ಳಿಯಿಂದ ರಾಜಧಾನಿಯ ತನಕ ಪಾದಯಾತ್ರೆ ಮಾಡಿರುವುದನ್ನು ಯಾರೂ ಮರೆಯಬಾರದು. ಮೊದಲನೆಯ ವಾಲ್ಮೀಕಿ ಜಾತ್ರೆಯಲ್ಲಿ ಉಳಿದ ಹಣದಲ್ಲಿ ಸಮಾಜದ ಅಭಿವೃದ್ಧಿಗಾಗಿ ಭೂಮಿ ಖರೀದಿ ಮಾಡಿರುವುದು ಶ್ರೀಗಳ ಸಮಾಜದ ಅಭಿವೃದ್ಧಿಯ ಕಳಕಳಿಯನ್ನು ತೋರಿಸುತ್ತದೆ ಎಂದರು.
ಹಾಲುಮತಸ್ಥರು ಮತ್ತು ನಾಯಕ ಸಮಾಜದವರು ಒಂದೇ ನಾಣ್ಯದ ಎರಡು ಮುಖ:
ಕಾಗಿನೆಲೆ ಮಠದ ಪೀಠಾಧಿಪತಿ ನಿರಂಜನಾನಂದ ಪುರಿ ಮಹಾಸ್ವಾಮೀಜಿ ಮಾತನಾಡಿ, ಯಾವುದೇ ಸಮುದಾಯವಾಗಲಿ ಗುರುಗಳು ಹೇಳಿದಾಗೆ ಭಕ್ತರು ಮಾಡಿದರೆ ಉಜ್ವಲವಾದ ಭವಿಷ್ಯವಿರುತ್ತದೆ. ಆದರೆ ಗುರುಗಳು ಮಾಡಿದ ಹಾಗೆ ಭಕ್ತರು ಮಾಡಿದರೆ ಸಮಾಜ ಉದ್ಧಾರವಾಗುವುದಿಲ್ಲ ಎಂದು ತಿಳಿಸಿದರು.
ಹಾಲುಮತಸ್ಥರು ಮತ್ತು ನಾಯಕ ಸಮಾಜದವರು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ವಾಲ್ಮೀಕಿಯವರು ರಚಿಸಿದ ರಾಮಾಯಾಣದ ತತ್ವವನ್ನು ಮತ್ತು ಸತ್ವವನ್ನು ತಿಳಿದುಕೊಂಡು ಜೀವನವನ್ನು ರೂಪಿಸಿಕೊಂಡಾಗ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬಹುದು. ಏಕ ವ್ಯಕ್ತಿಯಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ, ಅಲ್ಲದೆ ಎಲ್ಲವನ್ನು ಒಬ್ಬನೇ ಮಾಡುತ್ತೇನೆ ಎಂದರೆ ಯಶಸ್ಸು ಎನ್ನುವುದು ಗಗನ ಕುಸುಮವಾಗುತ್ತದೆ. ಆದರೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆದರೆ ವ್ಯಕ್ತಿಗೂ ಹಾಗೂ ಸಮಾಜಕ್ಕೂ ಯಶಸ್ಸು ದೊರೆಯುತ್ತದೆ ಎಂದು ಹೇಳಿದರು.