ದಾವಣಗೆರೆ: ಹಿರಿಯ ಐಪಿಎಸ್ ಅಧಿಕಾರಿ, ಡಿಜಿಪಿ ರವೀಂದ್ರನಾಥ್ ಅವರ ರಾಜೀನಾಮೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಡಿ.ಕೆ. ಶಿವಕುಮಾರ್ ಅವರು ಗಾಳಿಯಲ್ಲಿ ಗುಂಡು ಹೊಡೀತಾರೆ ಎಂದು ತಮ್ಮ ವಿರುದ್ಧ ಆರೋಪ ಮಾಡಿದ್ದ ಕೆಪಿಸಿಸಿ ಅಧ್ಯಕ್ಷರಿಗೆ ಶಾಸಕ ಎಂಪಿ ರೇಣುಕಾಚಾರ್ಯ ತಿರುಗೇಟು ನೀಡಿದರು.
ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಗಾಳಿಯಲ್ಲಿ ಗುಂಡು ಹೊಡೆಯುತ್ತಾರೆ. ಅಧಿಕಾರಿ ರವೀಂದ್ರನಾಥ್ ಅವರ ರಾಜೀನಾಮೆಗೆ ನಾನು ಕಾರಣ ಅಲ್ಲ. ನಾನು ಯಾವುದೇ ನಕಲಿ ಜಾತಿ ಪ್ರಮಾಣಪತ್ರ ಪಡೆದಿಲ್ಲ. ಶಿವಕುಮಾರ್ ಅವರು ವಿನಾಕಾರಣ ನನ್ನ ಮೇಲೆ ಆರೋಪ ಮಾಡುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ -ಡಿ.ಕೆ.ಶಿವಕುಮಾರ್ ನಡುವೆ ಸಿಎಂ ಆಗಬೇಕೆಂಬ ಶೀತಲ ಸಮರ ನಡೆಯುತ್ತಿದೆ. ಮುಖ್ಯಮಂತ್ರಿ ಆಗುತ್ತೇನೆಂದು ಡಿಕೆ ಶಿವಕುಮಾರ್ ಅವರು ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಎ,ಬಿ,ಸಿ,ಡಿ ಎಂಬ ಗುಂಪುಗಳಿವೆ. ಆದರೆ, ಬಿಜೆಪಿಯಲ್ಲಿ ಯಾವುದೇ ಗುಂಪುಗಳಿಲ್ಲ. 2023ರ ಚುನಾವಣೆಯಲ್ಲಿ ನಾವೆಲ್ಲ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಮುಳುಗುತ್ತಿರುವ ಕಾಂಗ್ರೆಸ್ ಹಡಗಿಗೆ ಡಿ.ಕೆ. ಶಿವಕುಮಾರ್ ಕ್ಯಾಪ್ಟನ್ ಎಂದು ಲೇವಡಿ ಮಾಡಿದರು.
ಓದಿ: 'ಮುಂದಿನ ಸಿಎಂ ವಿಜಯೇಂದ್ರ'..ಬಿಎಸ್ವೈ ಪುತ್ರನ ಪರ ಅಭಿಮಾನಿಗಳ ಘೋಷಣೆ