ಬೆಂಗಳೂರು: ಕೊರೊನಾ ಭೀತಿಯ ನಡುವೆಯೇ ರೈತರು ಮುಂಗಾರುಪೂರ್ವ ಕೃಷಿ ಚಟುವಟಿಕೆಗೆ ಅಣಿಯಾಗಿದ್ದಾರೆ. ಇತ್ತ ಕೃಷಿ ಇಲಾಖೆ ಕೃಷಿ ಚಟುವಟಿಕೆಗಾಗಿ ಬೇಕಾಗುವ ಯಾವುದೇ ಪರಿಕರಗಳ ಕೊರತೆ ಇಲ್ಲ ಅಂತಿದ್ರೆ, ಅತ್ತ ರೈತರು ಮಾತ್ರ ಆತಂಕದಲ್ಲಿ ಇದ್ದಾರೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮುಂಗಾರು ಪೂರ್ವ ಕೃಷಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಜೂನ್ನಲ್ಲಿ ರೈತರು ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಆರಂಭಿಸಲಿದ್ದಾರೆ. ಮುಂಗಾರು ಪೂರ್ವ ಕೃಷಿ ಚಟುವಟಿಕೆ ಚಾಮರಾಜನಗರ, ಮೈಸೂರು, ತುಮಕೂರು, ಹಾಸನ, ರಾಮನಗರ, ಮಂಡ್ಯ, ಚಿತ್ರದುರ್ಗ, ಚಿಕ್ಕಮಗಳೂರಿನಲ್ಲಿ ಹೆಚ್ಚಾಗಿರುತ್ತದೆ. ಇತ್ತ ಕೊರೊನಾ ಭೀತಿ, ಲಾಕ್ಡೌನ್ ಪ್ರತಿಕೂಲ ಪರಿಸ್ಥಿತಿಯ ಮಧ್ಯೆಯೇ ರೈತರು ತಮ್ಮ ಕೃಷಿ ಚಟುವಟಿಕೆ ಮಾಡಬೇಕಾಗಿದೆ. ಇದಕ್ಕಾಗಿ ಕೃಷಿ ಇಲಾಖೆ ಬಿತ್ತನೆ ಬೀಜ, ರಸಗೊಬ್ಬರವನ್ನು ಸಿದ್ಧಪಡಿಸಿಕೊಂಡಿದೆ.
ಬಿತ್ತನೆ ಬೀಜ ಲಭ್ಯತೆ ಹೇಗಿದೆ?:
ಕೃಷಿ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ ಕೃಷಿ ಚಟುವಟಿಕೆಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಇಲ್ಲ. ಈ ಬಾರಿ ಪೂರ್ವ ಮುಂಗಾರು ಸೇರಿ ಮುಂಗಾರು ಹಂಗಾಮಿನಲ್ಲಿ ಸುಮಾರು 77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಒಟ್ಟು 10.06 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯವಿದೆ. ಸದ್ಯ 5.97 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಬೇಕಾಗಿದೆ.
ರಸಗೊಬ್ಬರದ ಲಭ್ಯತೆ ಹೇಗಿದೆ?:
ರಾಜ್ಯಕ್ಕೆ ಒಟ್ಟು ಕೇಂದ್ರದಿಂದ 22.85 ಲಕ್ಷ ಟನ್ ರಸಗೊಬ್ಬರ ಹಂಚಿಕೆಯಾಗಿದೆ. ಈ ಪೈಕಿ ಏಪ್ರಿಲ್ ತಿಂಗಳಲ್ಲಿ 2.57 ಲಕ್ಷ ಟನ್ ರಸಗೊಬ್ಬರ ಬೇಕಾಗಿದೆ. ಈ ಪೈಕಿ ಯೂರಿಯಾ 0.85 ಲಕ್ಷ ಟನ್, ಫೋಸ್ಪೆಟ್ 0.70 ಲಕ್ಷ ಟನ್, ಪೊಟೇಷ್ 0.30 ಲಕ್ಷ ಟನ್ ಬೇಕಾಗಿದೆ. ಬಫರ್ ಸ್ಟಾಕ್ನಲ್ಲಿ ಸುಮಾರು 1.38 ಲಕ್ಷ ವಿವಿಧ ರಸಗೊಬ್ಬರ ಲಭ್ಯವಿದೆ. ಖಾಸಗಿ ಮತ್ತು ಸಹಕಾರಿ ಸಂಘಗಳಲ್ಲಿ ಒಟ್ಟು 7.30 ಲಕ್ಷ ಟನ್ ರಸಗೊಬ್ಬರ ಲಭ್ಯವಿದೆ.
ರೈತರಿಗೆ ರಸಗೊಬ್ಬರ ಕೊರತೆಯ ಆತಂಕ:
ಇತ್ತ ರೈತರು ಕೊರೊನಾ ಭೀತಿಯಲ್ಲಿದ್ದು, ಲಾಕ್ಡೌನ್ ಹಿನ್ನೆಲೆ, ಸಮರ್ಪಕ ರಸಗೊಬ್ಬರ ಸರಬರಾಜು ಕಷ್ಟ ಸಾಧ್ಯ ಎಂಬ ಆತಂಕದಲ್ಲಿ ಇದ್ದಾರೆ. ಆಮದು ನಿಷೇಧ ಕಾರಣ ಯೂರಿಯಾ ಮತ್ತು ಪೊಟೇಶ್ ಗೊಬ್ಬರ ಕೊರತೆಯಾಗುವ ಆತಂಕ ಇದೆ ಎಂದು ರಾಜ್ಯ ರೈತ ಸಂಘಗಳ ಒಕ್ಕೂಟ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ. ಪ್ರತಿ ವರ್ಷವೂ ರಸಗೊಬ್ಬರ ಯಥೇಚ್ಚವಾಗಿದೆ ಅಂದರೂ ರೈತರಿಗೆ ರಸಗೊಬ್ಬರದ ಸಮಸ್ಯೆ ಉಂಟಾಗುತ್ತಿರುತ್ತದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.