ಬೆಂಗಳೂರು: ಎಂಇಎಸ್ ಉದ್ಧಟತನದ ವಿರುದ್ಧ ಮತ್ತು ನಿಷೇಧಕ್ಕೆ ಆಗ್ರಹಿಸಿ ಡಿಸೆಂಬರ್ 31 ರಂದು ಕರೆ ಕೊಟ್ಟಿರುವ ಕರ್ನಾಟಕ ಬಂದ್ ನಡೆದೇ ನಡೆಯುತ್ತದೆ. ಅಂದು ಬೆಳಗ್ಗೆ 11ಕ್ಕೆ ಟೌನ್ಹಾಲ್ನಿಂದ ಪ್ರತಿಭಟನಾ ಮೆರವಣಿಗೆಯನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪುನರುಚ್ಚರಿಸಿದ್ದಾರೆ.
ಎಂಇಎಸ್ ನಿಷೇಧಕ್ಕೆ ಒತ್ತಾಯಿಸಿ ಗಾಂಧಿ ಬಜಾರ್ ವೃತ್ತದಲ್ಲಿ 'ಕುರ್ಚಿಗಳ ಸಮ್ಮೇಳನ' ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.
ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಇಂದು ಖಾಲಿ ಕುರ್ಚಿಗಳ ಸಮ್ಮೆಳನ ಮಾಡಲಾಗುತ್ತಿದೆ. ಜನರು ಬಂದ್ನಲ್ಲಿ ಭಾಗವಹಿಸಬೇಕು. ಎಂಇಎಸ್ ಸಂಘಟನೆ ನಿಷೇಧಿಸಬೇಕೆಂದು ಬಂದ್ ಮಾಡುತ್ತಿದ್ದೇವೆ. ಅವರನ್ನ ರಾಜ್ಯದಿಂದ ಹೊರಹಾಕಲು ಕನ್ನಡಿಗರು ಒಂದಾಗಬೇಕು. ಕನ್ನಡ ಬಾವುಟ ಹರಿದಿದ್ದಾರೆ. ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಸಿ ಬಳಿದಿದ್ದಾರೆ. ಇವರನ್ನ ಏನು ಮಾಡಬೇಕು ಹೇಳಿ ಎಂದು ಪ್ರಶ್ನಿಸಿದರು.
ಯಾರು ಏನೇ ಹೇಳಿದ್ರು ಡಿಸೆಂಬರ್ 31 ರಂದು ಬಂದ್ ನಡೆಯುತ್ತದೆ. ಅಂದು ಬಹಳ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತದೆ. ಟೌನ್ಹಾಲ್ನಿಂದ ಮೆಜೆಸ್ಟಿಕ್ವರೆಗೂ ಮೆರವಣಿಗೆ ನಡೆಸುತ್ತೇವೆ. ಶಾಂತಿ ರೀತಿಯಲ್ಲಿ ಪ್ರತಿಭಟನೆಯನ್ನು ಮಾಡಿ ಬಂದ್ ಯಶಸ್ವಿಯಾಗುವಂತೆ ಮಾಡುತ್ತೇವೆ. ಬೆಳಗಾವಿ ಒಂದೇ ಅಲ್ಲ, ಇಡೀ ಕರ್ನಾಟಕವೇ ಈ ಬಂದ್ಗೆ ಬೆಂಬಲ ನೀಡಬೇಕು ಎಂದರು.
ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು ಮಾತನಾಡಿ, ಎಂಇಎಸ್ ಕಿಡಿಗೇಡಿಗಳು ಕನ್ನಡದ ಬಾವುಟ ಸುಟ್ಟಿದ್ದಾರೆ. ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಭಂಗ ತರೋದನ್ನ ನೋಡಿಕೊಂಡು ಕನ್ನಡಿಗರು ಸುಮ್ನೆ ಕುಳಿತುಕೊಳ್ಳಲ್ಲ ಎಂದು ಗುಡುಗಿದರು.
ಕರ್ನಾಟಕದ ಮನೆಗೆ ಬೆಂಕಿ ಬಿದ್ದಿದೆ. ಕನ್ನಡಿಗರು ತಮ್ಮ ಶಕ್ತಿಯನ್ನ ಪ್ರದರ್ಶಿಸಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಡ ತಂದು ಎಂಇಎಸ್ ಸಂಘಟನೆಯನ್ನ ನಿಷೇಧಿಸಬೇಕಿದೆ. ಡಿಸೆಂಬರ್ 31 ರಂದು ಕರ್ನಾಟಕ ಬಂದ್ ನಡೆಸುತ್ತಿದ್ದೇವೆ. ವ್ಯಾಪಾರಸ್ಥರು, ಉದ್ಯಮಿಗಳು ಕೈ ಜೋಡಿಸಬೇಕು ಎಂದು ಕೋರಿದರು.
ತೆರೆದ ಜೀಪಿನಲ್ಲಿ ಬೆಂಗಳೂರು ರೌಂಡ್ಸ್
ಡಿಸೆಂಬರ್ 31ರ ಬಂದ್ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಘೋಷಣೆ ಕೂಗುತ್ತಾ ಪ್ರತಿಭಟನೆಗೆ ಬೆಂಬಲ ನೀಡಬೇಕು ಎಂದು ನಗರದ ಹಲವೆಡೆ ತೆರೆದ ಜೀಪಿನಲ್ಲಿ ರೌಂಡ್ಸ್ ಹಾಕಿದರು. ಇದಕ್ಕೂ ಮುನ್ನ ಒಂದು ಗಂಟೆಗೂ ಅಧಿಕ ಸಮಯ ತಡವಾಗಿ ಪ್ರತಿಭಟನೆ ಪ್ರಾರಂಭಿಸಿದ್ದಲ್ಲದೇ, ಕೇವಲ 2 ಕುರ್ಚಿಗಳನ್ನಿಟ್ಟು ಪ್ರತಿಭಟನೆ ನಡೆಸಲಾಯಿತು.
ಇದನ್ನೂ ಓದಿ: ರಾಜ್ಯದಲ್ಲಿಂದು 356 ಮಂದಿಗೆ ಕೋವಿಡ್ ಸೋಂಕು ದೃಢ, ಇಬ್ಬರು ಸೋಂಕಿತರ ಸಾವು