ಬೆಂಗಳೂರು: ಕರ್ನಾಟಕ ರಾಜ್ಯವು ವಿದೇಶಿ ಬಂಡವಾಳ ಹೂಡಿಕೆ ಹಾಗೂ ಸ್ಥಳೀಯ ಹೂಡಿಕೆಯಲ್ಲಿ ಮುಂಚೂಣಿಯನ್ನು ಕಾಯ್ದುಕೊಳ್ಳಲು ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಟೊಯೊಟಾ ಕಂಪನಿಯ 4800 ಕೋಟಿ ರೂ. ಹೂಡಿಕೆಗೆ ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಸಹಿ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ವಿವಿಧ ವಲಯಗಳಲ್ಲಿ ಹೂಡಿಕೆಗೆ ಪ್ರಶಸ್ತ ತಾಣವಾಗಿ ರೂಪಿಸಲು ನಮ್ಮ ಸರ್ಕಾರ ಸದ್ದಿಲ್ಲದೆ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಉತ್ಪಾದನೆ, ಸೇವಾ ವಲಯ, ಐಟಿ-ಬಿಟಿ, ಎಲೆಕ್ಟ್ರಾನಿಕ್ಸ್ ಸೆಮಿಕಂಡಕ್ಟರ್, ವಿದ್ಯುತ್ ವಾಹನಗಳು ಹೀಗೆ ವಿವಿಧ ವಲಯಗಳಲ್ಲಿ ಹೂಡಿಕೆಗೆ ಉತ್ತೇಜನ ನೀಡಲಾಗುತ್ತಿದೆ. ರಾಜ್ಯದಲ್ಲಿ ವಿವಿಧ ಹೂಡಿಕೆದಾರರೊಂದಿಗಿನ ಒಪ್ಪಂದದ ಕಾರ್ಯಕ್ರಮ ನಿಯಮಿತವಾಗಿ ನಡೆಯುತ್ತಿದೆ. ಕಳೆದ ವಾರ ಎಲೆಕ್ಟ್ರಾನಿಕ್ಸ್ ಸೆಮಿಕಂಡಕ್ಟರ್ ವಲಯದಲ್ಲಿ ಬೃಹತ್ ಒಪ್ಪಂದ ಸಹಿ ಮಾಡಲಾಯಿತು. ಇದೀಗ ಟೊಯೊಟಾದೊಂದಿಗೆ ಒಪ್ಪಂದ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ವಿದ್ಯುತ್ ವಾಹನಗಳ ತಯಾರಿಕೆಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟೊಯೊಟಾದೊಂದಿಗೆ ಒಪ್ಪಂದ: ರಾಜ್ಯವು ತಂತ್ರಜ್ಞಾನ ಹಾಗೂ ಹೂಡಿಕೆ ಎರಡರಲ್ಲೂ ಭಾರಿ ಮುನ್ನೆಡೆ ಸಾಧಿಸುತ್ತಿದೆ. ಟೊಯೊಟಾದಂತಹ ಪ್ರತಿಷ್ಠಿತ ಕಂಪನಿ ಪುನಃ ಪುನಃ ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿರುವುದು ರಾಜ್ಯವು ಹೂಡಿಕೆಗೆ ಹಾಗೂ ದೀರ್ಘಾವಧಿಯ ವ್ಯಾವಹಾರಿಕ ಬಾಂಧವ್ಯ ಹೊಂದಲು ಪ್ರಶಸ್ತ ತಾಣ ಎಂಬುದನ್ನು ಜಗತ್ತಿಗೆ ಸಾರುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟರು.
ಆರ್ಥಿಕತೆ ಅಭಿವೃದ್ಧಿಗೆ ಹೆಚ್ವು ಅವಕಾಶ: ಆಟೋಮೊಬೈಲ್ ಉದ್ಯಮಕ್ಕೆ ಹೆಚ್ಚು ಉದ್ಯೋಗ ಒದಗಿಸುವ ಅವಕಾಶವಿದೆ. ದೊಡ್ಡ ಮಟ್ಟದಲ್ಲಿ ಆರ್ಥಿಕ ಚಟುವಟಿಕೆಯನ್ನು ಸೃಜಿಸುವ ಸಾಮರ್ಥ್ಯ ಹೊಂದಿದೆ. ಆಟೋ ಮೊಬೈಲ್ ಉದ್ಯಮ ಬಹಳ ಮುಖ್ಯ ವಲಯ. ಜವಳಿ, ಸ್ಟೀಲ್, ಗಣಿಗಾರಿಕೆ, ಆಟೋ ಮೊಬೈಲ್ ಉತ್ಪಾದನಾ ವ್ಯವಸ್ಥೆಯು ಶ್ರೇಣೀಕೃತ ಪರಿಣಾಮವನ್ನು ಹೊಂದಿದೆ. ಟಾಟಾ , ಟಯೋಟಾ ಜೊತೆಗೆ ಇನ್ನಷ್ಟು ದೊಡ್ಡ ಕಂಪನಿಗಳು ಕರ್ನಾಟಕಕ್ಕೆ ಬಂದರೆ ಆಶ್ಚರ್ಯವಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕರ್ನಾಟಕದ ಮೂಲಭೂತ ಸೌಕರ್ಯಗಳನ್ನು ಹಾಗೂ ನೀತಿಗಳನ್ನು ಬಿಂಬಿಸಲು ಟಯೊಟಾ ಸಂಸ್ಥೆಯೇ ಸಾಕು. ಟಯೊಟಾ ಕಿರ್ಲೋಸ್ಕರ್ ಸಂಸ್ಥೆ ರಾಜ್ಯದಲ್ಲಿ ಇನ್ನಷ್ಟು ನಾವೀನ್ಯತೆ ಮೂಲಕ ವಿಸ್ತರಿಸಬೇಕು ಎಂಬ ಇಂಗಿತ ವ್ಯಕ್ತಪಡಿಸಿದರು.
5000 ಕೋಟಿ ಹೂಡಿಕೆಗೆ ಸಿದ್ಧವಾಗಿರಿ: 4800 ಕೋಟಿ ವಿಸ್ತರಣೆ ಸ್ವಾಗತಾರ್ಹವಾಗಿದ್ದು, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 5000 ಕೋಟಿ ಹೂಡಿಕೆಗೆ ಸಿದ್ಧವಾಗಿರಿ. ಸರ್ಕಾರ ಎಲ್ಲಾ ರೀತಿಯಲ್ಲಿ ನೆರವು ಹಾಗೂ ಬೆಂಬಲ ನೀಡಲಿದೆ. ಜಾಗತೀಕರಣದ ನಂತರ ಹಲವಾರು ವಲಯಗಳಲ್ಲಿ ಬದಲಾವಣೆಗಳಾಗಿವೆ. ಖಾಸಗಿ ಮತ್ತು ಸಾರ್ವಜನಿಕ ವಲಯಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಭವಿಷ್ಯಕ್ಕಾಗಿ ನಾವು ಬದಲಾಗೋಣ. ಹೆಜ್ಜೆಗೆ, ಹೆಜ್ಜೆ, ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡೋಣ ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.
ಕೈಗಾರಿಕಾ ಬಂಡವಾಳಸ್ನೇಹಿ ರಾಜ್ಯ: ಕರ್ನಾಟಕದ ಆಟೋಮೊಬೈಲ್ ಕ್ಷೇತ್ರದಲ್ಲಿ ಟೊಯೊಟಾ ಕಂಪನಿ ದೊಡ್ಡ ಇತಿಹಾಸವನ್ನು ರಚಿಸಿದೆ. ಕರ್ನಾಟಕ ಮತ್ತು ಟೊಯೊಟಾ ಕಂಪನಿಯದು ಹಳೆಯ ಬಾಂಧವ್ಯ. ಕೃಷಿ ಯಂತ್ರೋಪಕರಣದಿಂದ ಪ್ರಾರಂಭಿಸಿ ಮಷೀನ್ ಟೂಲ್ಸ್, ಎಲೆಕ್ಟ್ರಿಟಿಕ್ ಮೋಟರ್ಸ್ ಗಳ ನಂತರ ಆಟೋ ಮೊಬೈಲ್ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು.
ಮೂಲತಃ ಮಹಾರಾಷ್ಟ್ರದವರಾದರೂ ರವಿ ಕಿರ್ಲೋಸ್ಕರ್ ಅವರ ಹೃದಯ ಮಾತ್ರ ಕರ್ನಾಟಕಕ್ಕೆ ಸೇರಿದ್ದು. ಟೊಯೊಟಾ ಎಂಡಿ ವಿಕ್ರಂ ಕಿರ್ಲೋಸ್ಕರ್ ಅವರು ತಿಳಿಸಿರುವಂತೆ ಇಡೀ ದೇಶದಲ್ಲಿ ಕರ್ನಾಟಕ ಕೈಗಾರಿಕಾ ಬಂಡವಾಳ ಸ್ನೇಹಿಯಾದ ರಾಜ್ಯವಾಗಿದೆ. ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹಿಸುವ ನೀತಿಗಳಿವೆ. ರಾಜ್ಯದಲ್ಲಿ 'ಈಸ್ ಆಫ್ ಡೂಯಿಂಗ್ ಬಿಸ್ನೆಸ್ ನೀತಿ'ಯಿದ್ದು, ಇದನ್ನು ಮತ್ತಷ್ಟು ಸರಳೀಕರಿಸಲಾಗುವುದು ಎಂದರು.
ಆರ್ಥಿಕಾಭಿವೃದ್ಧಿಯಲ್ಲಿ ಕೈಗಾರಿಗಳ ಪಾತ್ರ: ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರಗಳಲ್ಲಿ ಆರ್ಥಿಕತೆಯ ಅಭಿವೃದ್ಧಿಗೆ ಕೈಗಾರಿಕೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಎರಡು ವಿಶ್ವ ಯುದ್ಧಗಳ ಪರಿಣಾಮ ಆಧುನಿಕ ತಂತ್ರಜ್ಞಾನ, ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಯಿತು. ಆಟೋ ಮೊಬೈಲ್ ಕ್ಷೇತ್ರದಲ್ಲಿ ಇಂಜಿನ್ ಹಾಗೂ ಟ್ರಾನ್ಸಮಿಷನ್ ನಲ್ಲಿನ ಬದಲಾವಣೆ ಇಡೀ ಸಾರಿಗೆ ವಲಯವನ್ನೇ ಬದಲಾಯಿಸಿತು. ಶಿಕ್ಷಣದಲ್ಲಿ ಮೊದಲು ಕಲಿತು ನಂತರ ಪರೀಕ್ಷೆ ಬರೆಯುತ್ತೇವೆ. ಆದರೆ ನಿಜ ಜೀವನದಲ್ಲಿ ಮೊದಲು ಪರೀಕ್ಷೆ ನೀಡಿ ನಂತರ ಕಲಿಯುತ್ತೇವೆ. ಆದ್ದರಿಂದ ಯಶಸ್ವಿಯಾಗಲು ಜೀವನ ಕಲಿಸುವ ಪಾಠಗಳು ಮುಖ್ಯವಾಗುತ್ತವೆ ಎಂದರು.
ಆಡಳಿತದಲ್ಲಿ ಆಳ ಚಿಂತನೆಯ ಅಗತ್ಯ: 1997ರಲ್ಲಿ ರಾಜ್ಯದಲ್ಲಿ ಟೊಯೊಟಾ ಕಂಪನಿಗೆ ಸವಲತ್ತು, ರಿಯಾಯತ್ತಿಗಳನ್ನು ನೀಡುವ ನಿರ್ಧಾರ ಸೂಕ್ತವಾಗಿದ್ದರಿಂದ ಟೊಯೊಟಾ ಕಂಪನಿಯಿಂದ ಆಟೋ ಮೊಬೈಲ್ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಾಯಿತು. ಇದರ ಪರಿಣಾಮವಾಗಿ ಆರ್ಥಿಕತೆ, ಆರ್ ಎಂಡ್ ಡಿ, ಎಕೋಸಿಸ್ಟಂಗಳ ಸುಧಾರಣೆ ಸಾಧ್ಯವಾಯಿತು. ಕೃಷಿ, ಸೇವಾ, ಸಾಫ್ಟ್ವೇರ್, ಉತ್ಪಾದನಾ ವಲಯಗಳನ್ನೂ ಸೇರಿದಂತೆ ಎಲ್ಲ ವಲಯಗಳ ಕೈಗಾರಿಕೆಗಳು ರಾಜ್ಯದಲ್ಲಿ ದೂರದೃಷ್ಟಿ ಚಿಂತನೆಯುಳ್ಳ ಆಡಳಿತ ಕರ್ನಾಟಕದಲ್ಲಿದೆ ಎಂಬ ಆತ್ಮವಿಶ್ವಾಸವಿರಲಿ. ಸವಾಲುಗಳ ನಡುವೆಯೇ ಸಾಧನೆ ಮಾಡುವುದೇ ವಿಶಿಷ್ಟವಾದುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ಕಳೆದ 70 ವರ್ಷದಿಂದ ಜನ ಸಮಸ್ಯೆಯಿಂದ ಬೇಸತ್ತಿದ್ದು, ಅದನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದೇವೆ : ಸಿಎಂ