ಬೆಂಗಳೂರು: ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ವೊಂದನ್ನು ಬಂಧಿಸುವಲ್ಲಿ ರಾಜಗೋಪಾಲ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ದೊಡ್ಡಬಳ್ಳಾಪುರದ ಕೆಂಚಪ್ಪ (34), ಲಗ್ಗೆರೆಯ ಹರೀಶ್ (27), ಮಹಮ್ಮದ್, ನವೀನ್, ವೆಂಕಟೇಶ ಕುಮಾರ್, ಜೇಮ್ಸ್ ಬಂಧಿತ ಆರೋಪಿಗಳು. ಬಂಧಿತರಿಂದ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರು ರಾತ್ರಿ ವೇಳೆ ಬೀಗ ಹಾಕಿರುವ ಮನೆಗಳನ್ನು ಟಾರ್ಗೇಟ್ ಮಾಡಿ, ಕಳ್ಳತನ ಮಾಡುತ್ತಿದ್ದರು. ಈ ಹಿಂದೆ ಸಹ ಕಳ್ಳತನ, ಕೊಲೆ ಯತ್ನ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿದ್ದರು. ಜೈಲಿನಿಂದ ಹೊರಬಂದ ಮೂರೇ ದಿನಗಳ ನಂತರ ಮತ್ತೆ ತಮ್ಮ ಹಳೆ ಚಾಳಿ ಮುಂದುವರೆಸಿದ್ದರು.
ರಾಜಗೋಪಾಲ ನಗರದ ಶ್ರೀನಿವಾಸ್ ಎಂಬುವರ ಮನೆಯಲ್ಲಿ ಕಳೆದ ತಿಂಗಳು 12ನೇ ತಾರೀಕು ಕಳ್ಳತನ ನಡೆದಿತ್ತು. ಈ ಕುರಿತು ಮನೆ ಮಾಲೀಕ ರಾಜಗೋಪಾಲ ಠಾಣೆಗೆ ದೂರು ನೀಡಿದ್ದರು. ನಿನ್ನೆ ಸಹ ಖದೀಮರು ಪೀಣ್ಯದಲ್ಲಿ ಮತ್ತೊಂದು ಮನೆಯಲ್ಲಿ ಕಳ್ಳತನ ಮಾಡಲು ಸಜ್ಜಾಗಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಬಂಧಿತರಿಂದ ಅರ್ಧ ಕೆ.ಜಿ. ಚಿನ್ನಾಭರಣ, ಎರಡು ಕಾರು, ಆಟೋ, ಲ್ಯಾಪ್ಟಾಪ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.