ಬೆಂಗಳೂರು: ಜ.18 ರಿಂದ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ಕಾಯ್ದೆಯ ಕರಡು ನಿಯಮಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
ಇತ್ತೀಚೆಗಷ್ಟೇ ರಾಜ್ಯಪಾಲರು ಗೋಹತ್ಯೆ ನಿಷೇಧ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದರು. ಇದೀಗ ಸರ್ಕಾರ ಜನವರಿ 18 ರಿಂದ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಇದೇ ವೇಳೆ ರಾಜ್ಯ ಸರ್ಕಾರ ಕಾಯ್ದೆ ಸಂಬಂಧ ಕರಡು ನಿಯಮವನ್ನು ಪ್ರಕಟಿಸಿದ್ದು, ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿದೆ.
ಕರಡು ನಿಯಮದಲ್ಲಿನ ಅಂಶ ಏನು?:
ಹಸುಗಳನ್ನು ಕೃಷಿ, ಪಶುಸಂಗೋಪನೆ ಉದ್ದೇಶಕ್ಕಾಗಿ ಸಾಗಣೆ ಮಾಡುವವರು ಸಾರಿಗೆ ದೃಢೀಕರಣ ಪತ್ರ, ಮಾಲೀಕತ್ವ ದಾಖಲೆ ಹಾಗೂ ಪಶು ಪ್ರಥಮ ಚಿಕಿತ್ಸಾ ಪರಿಕರಗಳನ್ನು ಹೊಂದಿರಬೇಕು. 15 ಕಿ.ಮೀ. ವ್ಯಾಪ್ತಿಯೊಳಗೆ ಎರಡು ಹಸು ಅಥವಾ ಅವುಗಳ ಕರುಗಳನ್ನು ಸಾಗಣೆ ಮಾಡಲು ಯಾವುದೇ ಸಾರಿಗೆ ದಾಖಲಾತಿಯ ಅಗತ್ಯ ಇಲ್ಲ ಎಂದು ಕರಡು ನಿಯಮದಲ್ಲಿ ತಿಳಿಸಲಾಗಿದೆ.
ಹಸು ಸಾಗಣೆ ಮಾಡುವ ಪ್ರತಿ ಸರಕು ಸಾಗಣೆ ವಾಹನದ ಮೇಲೆ ಕೆಂಪು ಬಣ್ಣದ ದಪ್ಪ ಅಕ್ಷರದಲ್ಲಿ ರವಾನಿಸುವವರು, ಸ್ವೀಕರಿಸುವವರ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಬರೆದಿರಬೇಕು. ಜೊತೆಗೆ ಸಾಗಣೆ ಮಾಡುತ್ತಿರುವ ಹಸುಗಳ ಸಂಖ್ಯೆ, ತಳಿ ಹಾಗೂ ಪೂರೈಸಲಾದ ಆಹಾರ ಪ್ರಮಾಣವನ್ನು ಬರೆದಿರಬೇಕು.
ಸಾಗಣೆ ಮಾಡುವ ಹಸುಗಳಿಗೆ ಯಥೇಚ್ಛವಾಗಿ ಹುಲ್ಲು ತಿನ್ನಿಸಿ, ನೀರು ಕುಡಿಸಿರಬೇಕು. ಯಥೇಚ್ಛ ಆಹಾರ, ಹುಲ್ಲು, ನೀರನ್ನು ಸಂಗ್ರಹಿಸಿರಬೇಕು. ಆರು ತಿಂಗಳ ಗರ್ಭಿಣಿ ಹಸುವನ್ನು ಸಾಗಣೆ ಮಾಡುವ ಹಾಗಿಲ್ಲ. ಆದರೆ, ಚಿಕಿತ್ಸೆ ಉದ್ದೇಶಕ್ಕಾಗಿ ಗರ್ಭಿಣಿ ಹಸುವನ್ನು ಸಾಗಣೆ ಮಾಡಬಹುದಾಗಿದೆ.
ಓದಿ: ಗೋ ಹತ್ಯೆ ನಿಷೇಧ ಕಾಯ್ದೆ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿದ ರಾಜ್ಯ ಸರ್ಕಾರ!
ಹಸುವನ್ನು ಸಾಗಿಸುವ ವಾಹನಗಳು ಸೂಕ್ತ ವ್ಯವಸ್ಥೆಯನ್ನು ಹೊಂದಿರಬೇಕು. ಹಸು ನಿಲ್ಲಿಸಲು ವಾಹನದಲ್ಲಿ ಖಾಯಂ ವಿಭಜನೆಗಳನ್ನು ಮಾಡಿರಬೇಕು. 100 ಕೆ.ಜಿ ಹಸುವನ್ನು ಕೊಂಡೊಯ್ಯಲು 1.5 ಚದರ ಮೀಟರ್ ಜಾಗದ ವಿಭಜನೆ ಮಾಡಿರಬೇಕು. 100 ಕೆ.ಜಿ. ಮೇಲ್ಪಟ್ಟ ಹಸುವನ್ನು ಕೊಂಡೊಯ್ಯಲು ವಾಹನದಲ್ಲಿ 2 ಚದರ ಮೀಟರ್ ಜಾಗದ ವಿಭಜನೆ ಮಾಡಿರಬೇಕು ಎಂದು ಕರಡು ನಿಯಮದಲ್ಲಿ ತಿಳಿಸಲಾಗಿದೆ.
ಹಸು ಸಾಗಿಸುವ ವಾಹನದ ವೇಗ ಪ್ರತಿ ಗಂಟೆಗೆ 25 ಕಿ.ಮೀ. ಮೀರಬಾರದು. ಹಸುಗಳನ್ನು ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆ ಅವಧಿಯಲ್ಲಿ ಸಾಗಾಟ ಮಾಡಬಾರದು. ಬೇಸಿಗೆ ಸಮಯವಾದ ಮಾರ್ಚ್ ನಿಂದ ಮೇ ಅವಧಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಹಸುವನ್ನು ಸಾಗಾಟ ಮಾಡುವ ಹಾಗಿಲ್ಲ ಎಂದು ತಿಳಿಸಲಾಗಿದೆ.