ಬೆಂಗಳೂರು: ಕೊರೊನಾ ಭೀತಿ ಇನ್ನು ಕಡಿಮೆ ಆಗುತ್ತಿಲ್ಲ. ಈಗಾಗಲೇ ಭಾರತ ಲಾಕ್ ಡೌನ್ ಆಗಿದೆ. ಎಲ್ಲರೂ ಮನೆಯಲ್ಲೇ ಇದ್ದು, ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಆದ್ರೆ ಈ ಚಿಂತೆಯ ನಡುವೆಯೂ ಸ್ಕೂಲ್ ಫೀಸ್ ಕಟ್ಟುವಂತೆ ಪೋಷಕರಿಗೆ ಸ್ಕೂಲ್ನಿಂದ ಮೆಸ್ಸೇಜ್ಗಳು ಬರುತ್ತಿವೆ ಎನ್ನುವ ಆರೋಪಗಳು ಕೇಳಿಬಂದಿವೆ.
ಕೆಲಸವಿಲ್ಲ, ಜೊತೆಗೆ ಆರ್ಥಿಕ ಹೊಡೆತದ ನಡುವೆ ಹೀಗೆ ಶುಲ್ಕ ಕಟ್ಟಲು ಕೊನೆ ದಿನಾಂಕವೆಂದು ಸಂದೇಶ ರವಾನಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಚಿಂತೆ ಪೋಷಕರನ್ನು ಕಾಡುತ್ತಿದೆ. ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಏಪ್ರಿಲ್ 20 ರವರೆಗೆ ದಾಖಲಾತಿ ಪ್ರಕ್ರಿಯೆ ಮುಂದೂಡುವಂತೆ ಸೂಚಿಸಿದೆ. ಇದರ ನಡುವೆಯೂ, ಖಾಸಗಿ ಶಾಲೆಗಳು ಸರಣಿ ಸಂದೇಶ ಹಾಕುವ ಮೂಲಕ ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಸುರೇಶ್ ಕುಮಾರ್, ಕೊರೊನಾ ಬಿಕ್ಕಟ್ಟು ಮುಗಿಯುವವರೆಗೂ ಯಾವುದೇ ಶಾಲೆ ಪ್ರವೇಶ ಪ್ರಕ್ರಿಯೆ ನಡೆಸಬಾರದು ಎಂದು ಸೂಚನೆ ಹೊರಡಿಸಿದ್ದೇವೆ. ಈ ಕುರಿತು ವಿಚಾರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಸಾಮಾಜಿಕ ಬಿಕ್ಕಟ್ಟಿನ ನಡುವೆ ಪೋಷಕರಿಗೆ ಅನಗತ್ಯವಾಗಿ ಕಿರುಕುಳ ನೀಡದಂತೆ ಕ್ರಮವಹಿಸುತ್ತೇನೆ. ಅಲ್ಲದೆ ಶಾಲಾ ಆಡಳಿತ ಮಂಡಳಿಯು ಸರ್ಕಾರದ ಕಾಳಜಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ನನ್ನ ಆಶಯ ಎಂದು ಅಭಿಪ್ರಾಯಪಟ್ಟಿದ್ದಾರೆ.