ಬೆಂಗಳೂರು: ಅವ್ಯವಹಾರದ ಆರೋಪದಡಿ ಅಮಾನತಿನಲ್ಲಿರುವ ವಿಧಾನಸಭೆ ಕಾರ್ಯದರ್ಶಿಯಾಗಿದ್ದ ಎಸ್.ಮೂರ್ತಿ ವಿರುದ್ಧ ಇಲಾಖಾ ವಿಚಾರಣೆ ಮುಂದುವರೆಸಲು ಆದೇಶ ಹೊರಡಿಸಲಾಗಿದೆ.
ಸ್ಪೀಕರ್ ಆದೇಶನುಸಾರ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಈ ಸಂಬಂಧ ಆದೇಶ ಹೊರಡಿಸಿದ್ದು, ಎಸ್.ಮೂರ್ತಿ, ಕಾರ್ಯದರ್ಶಿ (ಪ್ರಸ್ತುತ ಅಮಾನತ್ತು) ವಿರುದ್ಧ ಮಾಡಲಾಗಿರುವ ದೋಷಾರೋಪಗಳ ಬಗ್ಗೆ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳನ್ವಯ ಇಲಾಖಾ ವಿಚಾರಣೆಯನ್ನು ಮುಂದುವರೆಸಿ ಆರು ತಿಂಗಳೊಳಗೆ ವರದಿ ನೀಡುವಂತೆ ನಿರ್ದೇಶನ ನೀಡಿದ್ದಾರೆ.
ಈಗಾಗಲೇ ನೇಮಿಸಲಾಗಿರುವ ವಿಚಾರಣಾಧಿಕಾರಿ ಐಎಎಸ್ ಅಧಿಕಾರಿ ಅಜಯ್ ಸೇಠ್, ಹಿರಿಯ ವಕೀಲ ಕೆ.ವಿ.ನರಸಿಂಹನ್ ಪ್ರಕರಣದ ಇಲಾಖಾ ವಿಚಾರಣೆಯನ್ನು ಮುಂದುವರೆಸುವಂತೆ ಸೂಚಿಸಲಾಗಿದೆ. 2016 ಹಾಗೂ 2017ರಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನ ಸಂದರ್ಭದಲ್ಲಿ ತಲಾ 20 ಕೋಟಿ ಹಾಗೂ 21.5 ಕೋಟಿ ರೂ. ಅನಗತ್ಯ ಖರ್ಚು ಮಾಡಲಾಗಿದೆ. ತಾತ್ಕಾಲಿಕ ಶೌಚಾಲಯ, ಸ್ನ್ಯಾಕ್ಸ್, ಸುವರ್ಣ ವಿಧಾನಸೌಧ ನಿರ್ವಹಣೆ, ಸೊಳ್ಳೆ ಪರದೆ ಖರೀದಿಗಳಲ್ಲಿ ಅವ್ಯವಹಾರ ಸೇರಿದಂತೆ ಇತರೆ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಸೂಚಿಸಿದ್ದರು. ಹಣ ದುರುಪಯೋಗದ ಆರೋಪದಲ್ಲಿ ಎಸ್.ಮೂರ್ತಿಯವರನ್ನು ಡಿ. 27, 2018ರಂದು ಕಾರ್ಯದರ್ಶಿ ಸ್ಥಾನದಿಂದ ಅಮನಾತುಗೊಳಿಸಲಾಗಿತ್ತು.