ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷರ ಅಧಿಕೃತ ಪದಗ್ರಹಣ ಸಮಾರಂಭದ ಮಧ್ಯದಲ್ಲೇ ಊಟ ನೀಡಿಕೆ ಆರಂಭಿಸಿದ ಹಿನ್ನೆಲೆ ಕಾರ್ಯಕ್ರಮ ಮರೆತ ಕಾರ್ಯಕರ್ತರು ಊಟಕ್ಕಾಗಿ ಮುಗಿಬಿದ್ದರು.
ನಗರದ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಇಂದು ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ರಾಮಲಿಂಗಾರೆಡ್ಡಿ ಹಾಗೂ ದೃವನಾರಾಯಣ್ ಅಧಿಕೃತ ಪದಗ್ರಹಣ ಸಮಾರಂಭವನ್ನು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿತ್ತು. ಬೆಳಗ್ಗೆ 10.45ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ 11.30ಕ್ಕೆ ಆರಂಭವಾಯಿತು. ಮಧ್ಯಾಹ್ನ 1.30ರವರೆಗೂ ಕೇವಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣ ಮಾಡಿ ಮುಗಿಸಿದ್ದರು.
ಚೌಡಯ್ಯ ಸ್ಮಾರಕ ಭವನದ ಒಳಗೆ ಸ್ಥಳವಕಾಶ ಕೊರತೆ ಹಿನ್ನೆಲೆ ಎರಡು ಬೃಹತ್ ಡಿಜಿಟಲ್ ಡಿಸ್ಪ್ಲೇ ಅಳವಡಿಸಲಾಗಿತ್ತು. ಅಲ್ಲಿ ನೂರಾರು ಕಾರ್ಯಕರ್ತರು ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಇದೇ ಸಂದರ್ಭ ಊಟ ನೀಡಿಕೆ ಸಭಾಂಗಣದ ಹೊರಭಾಗದಲ್ಲಿ ಆರಂಭವಾಗುತ್ತಿದ್ದಂತೆ ಅಲ್ಲಿ ಕುಳಿತಿದ್ದ ಕಾರ್ಯಕರ್ತರು ಒಮ್ಮೆಲೇ ಊಟಕ್ಕಾಗಿ ಮುಗಿಬಿದ್ದರು.
ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸೇರಿದಂತೆ ಯಾವುದೇ ಮುಖಂಡರು ಆಡಿದ ಮಾತನ್ನು ಕೇಳಿಸಿಕೊಳ್ಳಲು ಕಾರ್ಯಕರ್ತರು ಕಾಣಸಿಗಲಿಲ್ಲ. ಕೆಲವರು ಊಟದ ನಂತರ ತಮ್ಮ ಪಾಡಿಗೆ ತಾವು ಹೊರಟು ಹೋದರೆ, ಮತ್ತೆ ಕೆಲವರು ಸಭಾಂಗಣದ ಒಳಗೆ ಆಗಮಿಸಿ ನಿದ್ರೆಗೆ ಜಾರಿದ್ದು ಕಂಡು ಬಂತು.
ಆರಂಭದಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿದ್ದ ಕಾರ್ಯಕರ್ತರು, ಕೊನೆ ಕೊನೆಗೆ ವಿರಳವಾಗುತ್ತಾ ಸಾಗಿದರು. ವೇದಿಕೆ ಏರಿ ಭಾಷಣ ಮಾಡಿದ ಮುಖಂಡರು ಸಹ ತಮ್ಮ ಸರದಿ ಮುಗಿಯುತ್ತಿದ್ದಂತೆ ಕೆಳಗಿಳಿದು ವೇದಿಕೆಯಿಂದ ಹೊರ ನಡೆದಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರು ಪದಗ್ರಹಣ ಸಮಾರಂಭ ಒಂದು ಹಂತಕ್ಕೆ ಯಶಸ್ಸು ಕಂಡರೂ ಊಟದ ಸಂದರ್ಭದಲ್ಲಿ ಮಾತ್ರ ಕಾರ್ಯಕರ್ತರು ಊಟದ ಕಡೆ ಮುಖ ಮಾಡಿದರು. ಇದರಿಂದಾಗಿ ಸಾಕಷ್ಟು ನೂಕುನುಗ್ಗಲು ಸಹ ಉಂಟಾಯಿತು.