ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವ ಪರಿಹಾರಗಳು ಯಾವುದಕ್ಕೂ ಸಾಲುವುದಿಲ್ಲ. ಇನ್ನೂ ಹಲವಾರು ಬೇಡಿಕೆಗಳಿದ್ದು, ಆ ಬೇಡಿಕೆಗಳನ್ನು ಪರಿಗಣಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆರ್.ವಿ. ದೇಶಪಾಂಡೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಹಲವು ಸಮಸ್ಯೆಗಳು ತಲೆಯೆತ್ತುತ್ತಿವೆ. ಸಂಪನ್ಮೂಲ ಕ್ರೋಢೀಕರಣ ಹಾಗೂ ಜನಸೇವೆಗೆ ಅಗತ್ಯವಿರುವ ನಿಲುವು ಕೈಗೊಳ್ಳುವ ವಿಚಾರದಲ್ಲಿ ರಾಜ್ಯ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕು. ಕಾರ್ಮಿಕರು, ದಿನಗೂಲಿ ನೌಕರರು ಹಾಗೂ ಕುಶಲಕರ್ಮಿಗಳ ಜೀವನ ಭದ್ರತೆಗೆ ಸರ್ಕಾರ ಯೋಜನೆ ರೂಪಿಸಬೇಕಿದೆ. ಇದೇ ರೀತಿ ರೈತರು ಕೈಗಾರಿಕೋದ್ಯಮಿಗಳ ಪ್ರಗತಿಗೂ ಕೊಡುಗೆ ನೀಡಬೇಕಿದೆ ಎಂದು ದೇಶಪಾಂಡೆ ಮನವಿ ಮಾಡಿದ್ದಾರೆ.