ಬೆಂಗಳೂರು: ನೆಲಮಂಗಲದ ಬಾವಿಕೆರೆಯಲ್ಲಿ ಜೆಡಿಎಸ್ ಪಕ್ಷದ ಜನತಾ ಜಲಧಾರೆ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮದಲ್ಲಿ 5 ಲಕ್ಷಕ್ಕೂ ಹೆಚ್ಚು ಭಾಗವಹಿಸುವ ಸಾಧ್ಯತೆ ಇದೆ. ಸಮಾವೇಶದಲ್ಲಿ ಭಾಗಿಯಾಗುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಊಟೋಪಚಾರಕ್ಕಾಗಿ 3 ಸಾವಿರ ಬಾಣಸಿಗರು ಮತ್ತು 2 ಸಾವಿರ ಊಟ ಬಡಿಸುವ ಸಿಬ್ಬಂದಿ ನಿಯೋಜಿಸಲಾಗಿದೆ.
ಜನತಾ ಜಲಧಾರೆ ಸಮಾರೋಪ ಸಮಾವೇಶ ಮುಂಬರುವ ಚುನಾವಣೆಯ ಪ್ರಚಾರಕ್ಕೆ ವೇದಿಕೆಯೂ ಆಗಲಿದೆ. ರಾಜ್ಯದ ವಿವಿಧೆಡೆಯಿಂದ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಲಿದ್ದು, ಇದಕ್ಕಾಗಿ ಕಳೆದ ಹದಿನೈದು ದಿನಗಳಿಂದ ನೆಲಮಂಗಲದ ಬಾವಿಕೆರೆಯ ಬಳಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ಶಾಂತಿಯ ತೋಟವನ್ನು ಪವಿತ್ರಗೊಳಿಸಲು ಗಂಗಾ ಜಲ ಸಂಗ್ರಹಿಸಿದ್ದೇವೆ: ಸರ್ಕಾರಕ್ಕೆ ಹೆಚ್ಡಿಕೆ ಟಾಂಗ್
ಅಡುಗೆ ಬಡಿಸುವ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಇಂದು ಬೆಳಗ್ಗೆ 10 ಗಂಟೆಯಿಂದಲೇ ಫಲಾವ್ ಮತ್ತು ಜಿಲೇಬಿಯನ್ನು ಜನರಿಗೆ ನೀಡಲಾಗಿದೆ. ಸಂಜೆ 4 ಗಂಟೆಗೆ ಉಪ್ಪಿಟ್ಟು - ಕೇಸರಿಬಾತ್, ಮಜ್ಜಿಗೆ ವಿತರಿಸಲು ನಿರ್ಧರಿಸಲಾಗಿದೆ. ಊಟೋಪಚಾರದ ಹೊಣೆಯನ್ನು ಸತೀಶ್ ನೇತೃತ್ವದ ಎ.ಎಸ್.ಕೇಟರಿಂಗ್ಗೆ ಕೊಡಲಾಗಿದೆ.
ಹೆಚ್ಡಿಕೆ ಪರಿಶೀಲನೆ: ಬೃಹತ್ ಪ್ರಮಾಣದಲ್ಲಿ ಆಗುತ್ತಿರುವ ಅಡುಗೆ ತಯಾರಿ ಕೆಲಸವನ್ನು ಕುಮಾರಸ್ವಾಮಿ ಪರಿಶೀಲನೆ ನಡೆಸಿದರು.