ಬೆಂಗಳೂರು: ಸಾಲುಮರದ ತಿಮ್ಮಕ್ಕ ಅವರು ಇಡೀ ಮನುಕುಲಕ್ಕೆ ಮಾದರಿಯಾಗಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ ಇವರು ಮನುಕುಲಕ್ಕೆ ಸಂದೇಶ ಸಾರಿದ್ದಾರೆ. ಮುಂದಿನ ಪೀಳಿಗೆ ಪರಿಸರ ರಕ್ಷಣೆ ಮಾಡುವತ್ತ ಜಾಗೃತರಾಗಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಹಾಗೂ ಸಾಲುಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಫೌಂಡೇಷನ್ ಆಶ್ರಯದಲ್ಲಿ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ 2018-19ನೇ ಸಾಲಿನ ಪ್ರಶಸ್ತಿ ಪ್ರದಾನ ಹಾಗೂ ಡಾ.ಜಿ. ಪರಮೇಶ್ವರ ದಂಪತಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಪರಮೇಶ್ವರ್, ಸಾಲು ಮರದ ತಿಮ್ಮಕ್ಕ ಅವರು ಮಕ್ಕಳಂತೆ ಮರಗಳನ್ನು ಬೆಳೆಸಿ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದರು. ಪ್ರಸ್ತುತ, 100 ಜನ ಪ್ರತಿಭಾವಂತ, ಪ್ರಭಾವಿ ಮಹಿಳೆಯರಲ್ಲಿ ಸಾಲುಮರದ ತಿಮ್ಮಕ್ಕ ಅವರು ಒಬ್ಬರು. ಇದು ರಾಜ್ಯಕ್ಕೆ ಹೆಮ್ಮೆಯ ವಿಚಾರ ಎಂದರು.
ಜನಸಮುದಾಯದಲ್ಲಿ ಪರಿಸರದ ಪ್ರಜ್ಞೆ ಮೂಡಿಸುವಲ್ಲಿ ಇವರ ಪಾತ್ರ ದೊಡ್ಡದು. ಇಡೀ ವಿಶ್ವದಲ್ಲಿ ಶೇ.31 ರಷ್ಟು ಭಾಗ ಮಾತ್ರ ಅರಣ್ಯ ಭಾಗ ಎಂದು ಗುರುತಿಸಲಾಗಿದೆ. ಅಂದರೆ, 4 ಬಿಲಿಯನ್ ಹೆಕ್ಟೇರ್ ಎಂದು ಅಂದಾಜಿಸಲಾಗಿದೆ. ಹಿಂದೆ 6 ಬಿಲಿಯನ್ ಹೆಕ್ಟೇರ್ ಪ್ರದೇಶ ಹಸಿರು ಮಯವಾಗಿತ್ತು. ಬರೋಬ್ಬರಿ 2 ಬಿಲಿಯನ್ ಹೆಕ್ಟೇರ್ ಅರಣ್ಯವನ್ನು ನಾಶವಾಗಿದೆ. ರಾಜ್ಯದಲ್ಲಿ ಶೇ 22.6 ರಷ್ಟು ಮಾತ್ರ ಹಸಿರು ಇದೆ. ಹಸಿರು ಕಡಿಮೆ ಆದಷ್ಟು ಮಳೆಯು ಸಹ ಕ್ರಮೇಣ ಕಡಿಮೆ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದಿಲ್ಲಿ ಗಾಳಿ ಕಲುಷಿತವಾಗಿದೆ:
ದೆಹಲಿಯಲ್ಲಿ ಗಾಳಿಯು ಸಹ ಕಲುಷಿತಗೊಂಡಿದ್ದು, ಇಲ್ಲಿಯೂ ಸಹ ಹಾಗೇ ಆಗುತ್ತಿದೆ. ಪರಿಸರ ರಕ್ಷಣೆ ಮಾಡುವ ಸಂದೇಶ ಮುಂದಿನ ಪೀಳಿಗೆಗೆ ನೀಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಉಸಿರಾಡುವ ಗಾಳಿಯು ವಿಷಯುಕ್ತವಾಗಲಿದೆ. ನಗರದಲ್ಲಿ ಕೇಬಲ್ ಲೈನ್ ಹಾವಳಿ ಹೆಚ್ಚಾಗಿದೆ. ಬೆಂಗಳೂರು ಉಸ್ತುವಾರಿ ವಹಿಸಿಕೊಂಡ ಮೇಲೆ 5 ಸಾವಿರ ಕಿ.ಮೀ. ಕೇಬಲ್ ಲೈಲ್ಗಳನ್ನು ತೆರವು ಮಾಡಲಾಗಿದೆ. ಕೇಬಲ್ಗಳನ್ನು ಅನಧಿಕೃತವಾಗಿ ಹಾಕುವುದಕ್ಕೆ ಕಡಿವಾಣ ಹಾಕಲಾಗಿದೆ. ಅನಧಿಕೃತ ಕೇಬಲ್ಗಳ ತೆರವಿಗೂ ಸೂಚಿಸಲಾಗಿದೆ. ಅಧಿಕೃತ ಕೇಬಲ್ಗಳಿಗೆ ಬಿಬಿಎಂಪಿ ಅವಕಾಶ ನೀಡುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರವಿರುವ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಉಪಸ್ಥಿತರಿದ್ದರು.
ಸಮಾರಂಭದ ನಂತರ ಸುದ್ದಿಗಾರರ ಜೊತೆ ಮಾತನಾಡಿ, ಜಾರಿ ನಿರ್ದೇಶನಾಲಯವು ಸಚಿವ ಜಮೀರ್ ಅಹಮದ್ಗೆ ನೊಟೀಸ್ ಅಷ್ಟೇ ಕೊಟ್ಟಿದೆ. ನೊಟೀಸ್ಗೆ ಉತ್ತರ ಕೊಡುತ್ತಾರೆ. ಹಲವರಿಗೆ ಇಡಿ ನೊಟೀಸ್ ಕೊಡುತ್ತೆ. ಈ ಹಿಂದೆ ಯಡಿಯೂರಪ್ಪ ಅವರಿಗೂ ನೊಟೀಸ್ ಕೊಟ್ಟಿದೆ. ಜಮೀರ್ ನೊಟೀಸ್ಗೆ ಉತ್ತರ ಕೊಟ್ಟ ಬಳಿಕ ತಪ್ಪಿದೆ ಅಂತ ಗೊತ್ತಾದರೆ ಮುಂದೆ ಅದರ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಪರಮೇಶ್ವರ ಹೇಳಿದರು.
ಕೇಬಲ್ ಕಟ್:
ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕೇಬಲ್ ಹಾಕಿದ್ದರು. ಒಬ್ಬ ಹೆಣ್ಣುಮಗಳು ಕೇಬಲ್ಗೆ ಸಿಕ್ಕಿ ಪ್ರಾಣಕಳೆದುಕೊಂಡಿದ್ದಳು. ಹೀಗಾಗಿ ಅನಧಿಕೃತ ಕೇಬಲ್ ಕಟ್ ಮಾಡಿದ್ದೇವೆ. ಸುಮಾರು 5 ಸಾವಿರ ಕಿ.ಮೀ ಕೇಬಲ್ ಕಟ್ ಮಾಡಿಸಿದ್ದೇನೆ. ಮುಂದೆ ಹಂತಹಂತವಾಗಿ ಕೇಬಲ್ ಕಟ್ ಮಾಡಿಸುತ್ತೇನೆ. ಮರಗಳ ಮೇಲೆ ಹಾದುಹೋಗಿರುವ ಕೇಬಲ್ ತೆಗೆಸುತ್ತೇನೆ ಎಂದು ಹೇಳಿದರು.