ಬೆಂಗಳೂರು: ಕರ್ನಾಟಕ ಕಲಾ ಪರಿಷತ್ತಿನ ಸಹಯೋಗದಲ್ಲಿ ನಾಳೆಯಿಂದ 8ರ ವರೆಗೆ ಭಾರತ್ ಕಲಾ ಉತ್ಸವ ನಡೆಯಲಿದೆ. ಒಂದೇ ಸೂರಿನಲ್ಲಿ ಭಾರತದ ಕಲಾವಿದರ ಚಿತ್ರಗಳು ಪ್ರದರ್ಶನವಾಗಲಿದೆ. 2011ರಿಂದ ಆರಂಭವಾದ ಭಾರತ್ ಕಲಾ ಉತ್ಸವ ದೆಹಲಿ ಮುಂಬೈನಲ್ಲಿ ಆಯೋಜಿಸಲಾಗುತ್ತಿತ್ತು. ಈ ಬಾರಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದು, ನಾಳೆಯಿಂದ ನಾಲ್ಕು ದಿನಗಳ ಕಾಲ ಕಲಾ ಪ್ರದರ್ಶನ ನಡೆಯಲಿದ್ದು, ಆಸಕ್ತರು ಪ್ರತಿದಿನ 11 ಗಂಟೆಯಿಂದ ರಾತ್ರಿ 8 ರವರೆಗೆ ವೀಕ್ಷಣೆಗೆ ಬರಬಹುದು ಎಂದು ಸಿಕೆಪಿ ಅಧ್ಯಕ್ಷ ಬಿ.ಎಲ್. ಶಂಕರ್ ತಿಳಿಸಿದರು.
ಕಲಾ ಪರಿಷತ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾನಾಡಿದ ಅವರು, ಪ್ರಸ್ತುತ ಕಲಾ ಉತ್ಸವದಲ್ಲಿ ದೇಶದ ಪ್ರತಿಷ್ಠಿತ 25 ಕಲಾ ಗ್ಯಾಲರಿಗಳು ಮತ್ತು 100ಕ್ಕೂ ಅಧಿಕ ಖ್ಯಾತ ಕಲಾವಿದರು ಹಾಗೂ 300 ಉತ್ಸಾಹಿ ಮತ್ತು ಯುವ ಕಲಾವಿದರು ಭಾಗವಹಿಸುತ್ತಿದ್ದಾರೆ. ಅಂದಾಜು 3000ಕ್ಕಿಂತ ಅಧಿಕ ಕಲಾಕೃತಿಗಳು, 80 ಕ್ಕೂ ಅಧಿಕ ಮಳಿಗೆ (ಬೂಥ್)ಗಳಲ್ಲಿ, ಈ ಕಲಾ ಉತ್ಸವದಲ್ಲಿ ಪ್ರದರ್ಶನಗೊಳ್ಳುತ್ತವೆ ಅಂತ ತಿಳಿಸಿದರು.
2011ರಿಂದ ಭಾರತ್ ಕಲಾ ಉತ್ಸವವನ್ನು ಪ್ರಾರಂಭಿಸಲಾಯಿತು. ಈ ಕಲಾ ಉತ್ಸವದ ರೂವಾರಿ ಮುಂಬೈನ ರಾಜೇಂದ್ರ ಪಾಟೀಲ್. ಆರಂಭದಲ್ಲಿ ದೆಹಲಿ ಹಾಗೂ ಮುಂಬೈಗಳ ಕ್ರಮವಾಗಿ ಆಯೋಜಿಸಿಕೊಂಡು ಬಂದಿದ್ದಾರೆ. ಈ ಸಲ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಉತ್ಸವದ ಮೂಲ ಉದ್ದೇಶ, ಸಮಕಾಲೀನ ಕಲಾವಿದರನ್ನು ಮತ್ತು ಕಲಾಕೃತಿಗಳನ್ನು ಒಂದೇ ಸೂರಿನಡಿ ತರುವುದು ಹಾಗೂ ಪ್ರದರ್ಶಿಸುವುದಾಗಿದೆ ಎಂದರು.
ನಂತರ ಮಾತಾನಾಡಿದ ಕಲಾ ಉತ್ಸವದ ನಿರ್ದೇಶಕ ರಾಜೇಂದ್ರ ಪಾಟೀಲ್, ಇಂಡಿಯಾ ಆರ್ಟ್ ಫೆಸ್ಟಿವಲ್- ಸಾವಿರಾರು ಯುವ ಕಲಾವಿದರಿಗೆ ತಮ್ಮ ಕಲಾ ಕೃತಿಗಳನ್ನು ಪ್ರದರ್ಶಿಸಲು ಒಂದು ಪರಿಪೂರ್ಣವಾದ ವೇದಿಕೆಯಾಗಿದೆ. ಕಲಾಸಕ್ತರೂ ಕೂಡ ತಮಗೆ ಇಷ್ಟವಾದ ಕಲಾಕೃತಿಗಳನ್ನು ಖರೀದಿಸಲು, ಸಂಗ್ರಹಿಸಲು ಸಾಧ್ಯವಾಗುತ್ತದೆ. ಕಲೆಯ ಬಗ್ಗೆ ಕಲಾವಿದರೊಂದಿಗೆ ಚರ್ಚಿಸಲು ವೇದಿಕೆ ಇದಾಗಿರಲಿದೆ ಎಂದು ತಿಳಿಸಿದರು.
ಪ್ರಸ್ತುತ ವರ್ಷದ ಕಲಾ ಉತ್ಸವದಲ್ಲ 100 ಹಿರಿಯ ಕಲಾವಿದರು ಭಾಗವಹಿಸುತ್ತಿದ್ದಾರೆ. ಅವರ ಕಲಾಕೃತಿಗಳನ್ನು ದೇಶದ ವಿವಿಧ ಕಡೆಗಳಲ್ಲಿರುವ ಗ್ಯಾಲರಿಯವರು ಇಲ್ಲಗೆ ತಂದು ಪ್ರದರ್ಶಿಸುತ್ತಿದ್ದಾರೆ. ಸಿಂಗಾಪೂರಿನ ಗ್ಯಾನಿ ಗ್ಯಾಲರಿಯ ಹತ್ತು ಆಯ್ದ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಲಾಗುವುದು ಎಂದರು.
ಶಾಲಾ ಕಾಲೇಜಿನಲ್ಲಿ ಚಿತ್ರಕಲೆಯನ್ನು ಪಠ್ಯೇತರ ಚಟುವಟಿಕೆಯಾಗಿ ಸೇರಿಸಬೇಕು: ಫಿಸಿಕಲ್ ಎಜುಕೇಶನ್, ಆರ್ಟ್ಸ್ ಇವೆಲ್ಲವೂ ಶಾಲಾ ಕಾಲೇಜುಗಳ ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು. ಈ ಹಿಂದೆ ಚಿತ್ರಕಲೆಯನ್ನು ಕೂಡ ಮಕ್ಕಳಿಗೆ ಶಾಲೆಯಲ್ಲಿ ಕಲಿಸಿಕೊಡಲಾಗುತ್ತಿತ್ತು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಕೂಡ ಮಕ್ಕಳ ವಿಕಸನಕ್ಕೆ ಸಹಕಾರಿ ಆಗಲಿದೆ. ಹೀಗಾಗಿ ಚಿತ್ರಕಲೆ ಕೂಡ ಪಠ್ಯದ ಭಾಗವಾಗಬೇಕು ಎಂದು ಬಿ.ಎಲ್ ಶಂಕರ್ ಒತ್ತಾಯಿಸಿದರು.
ಇದನ್ನೂ ಓದಿ: ಡೆನ್ಮಾರ್ಕ್ನಲ್ಲಿ ಮೋದಿ : ಅಭಿವೃದ್ಧಿ ವಿಷಯಗಳ ಬಗ್ಗೆ ಮಹತ್ವದ ಚರ್ಚೆ