ಬೆಂಗಳೂರು : ಲಾಕ್ಡೌನ್ ಎಫೆಕ್ಟ್ನಿಂದ ಹಿರಿಯ ಪೊಲೀಸ್ ಅಧಿಕಾರಿಯ ವೈಯಕ್ತಿಕ ನಂಬರ್ ಹೆಲ್ಪ್ಲೈನ್ ನಂಬರ್ ಆಗಿ ಬದಲಾದ ಘಟನೆ ನಗರದಲ್ಲಿ ನಡೆದಿದೆ. ಲಾಕೌಡೌನ್ ಪರಿಸ್ಥಿತಿಯಲ್ಲಿ ಕಷ್ಟಕ್ಕೆ ಸಿಲುಕಿದ ಉತ್ತರ ಭಾರತದ ಜನರಿಗೆ ಸಹಾಯ ಮಾಡಲು ಹೋದ ಕರ್ನಾಟಕ ರಾಜ್ಯದ ಖಡಕ್ ಐಪಿಎಸ್ ಅಧಿಕಾರಿಗೆ ಸದ್ಯ ಫೋನ್ನಿಂದ ಕಿರಿ ಕಿರಿ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಅದನ್ನ ಲೆಕ್ಕಿಸದೇ ಮಾನವೀಯತೆ ಮೆರೆದು ಮತ್ತೆ ಬಡವರಿಗೆ ಸಹಾಯ ಮಾಡೋದರಲ್ಲಿ ಈ ಐಪಿಎಸ್ ಅಧಿಕಾರಿ ಮುಂದಾಗಿದ್ದಾರೆ.
ಪೊಲೀಸ್ ಇಲಾಖೆಯ ಆಡಳಿತ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದಿನ ಬೆಳಗಾದ್ರೆ ಸಾಕು ತಮ್ಮ ವೈಯಕ್ತಿಕ ನಂಬರ್ಗೆ ನೂರಾರೂ ಕಾಲ್ ಬರುತ್ತಿವೆ. ಕೊರೊನಾ ಸೋಂಕು ಬಂದ ನಂತರ ಬಿಹಾರ ಮೂಲದ ಕೂಲಿ ಕಾರ್ಮಿಕರು ಬಿಹಾರಕ್ಕೆ ತೆರಳಲು ಕರೆ ಮಾಡಿದ್ದರು.
ಅಚಾನಕ್ಕಾಗಿ ಬಂದ ಕಾಲ್ಗೆ ಸ್ಪಂದಿಸಿದ್ದ ಹಿರಿಯ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಕೂಲಿ ಕಾರ್ಮಿಕರಿಗೆ ಸಹಾಯ ಮಾಡಿದ್ದರು. ಸಹಾಯ ಪಡೆದ ಕೂಲಿ ಕಾರ್ಮಿಕರು ಉಳಿದವರಿಗೂ ನಂಬರ್ ಶೇರ್ ಮಾಡಿದ್ದಾರೆ. ಹೀಗಾಗಿ ಬಿಹಾರ, ಯುಪಿ, ಮಧ್ಯಪ್ರದೇಶ, ಒರಿಶಾ ಸೇರಿದಂತೆ ಹಲವು ರಾಜ್ಯಗಳ 5 ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರು ಕರೆ ಮಾಡಿ ಸಹಾಯ ಕೇಳಿದ್ದಾರೆ.
ಬಿಹಾರ ಕೂಲಿ ಕಾರ್ಮಿಕರಿಗೆ ಸಹಾಯ ಮಾಡಿದ ಐಪಿಎಸ್ ಅಧಿಕಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಹಾಯ ಮಾಡುವಂತೆ ಸೂಚಿಸಿದ್ದಾರೆ. ಹಾಗೆ ಇನ್ನೂ ಕೂಡ ಬರುತ್ತಿರುವ ಕರೆಗೆ ಹೆಚ್ಚಿನ ಸ್ಪಂದನೆ ನೀಡುತ್ತಿದ್ದಾರೆ.