ಬೆಂಗಳೂರು: ಮಹಾನಗರಿ ಬೆಂಗಳೂರಿನಲ್ಲಿ ಮಳೆ ಬಂತು ಎಂದರೆ ಸಾಕು ಅವಾಂತರಗಳ ಸರಮಾಲೆಯೇ ಸೃಷ್ಟಿಯಾಗುತ್ತದೆ. ಅಂತೆಯೇ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೊಡಿಗೇಹಳ್ಳಿ ರೈಲ್ವೆ ಅಂಡರ್ ಪಾಸ್ ಕೆರೆಯಾಗಿ ಮಾರ್ಪಾಡಾಗಿತ್ತು
ಬಿಬಿಎಂಪಿ ವಾರ್ಡ್ ನಂ.8ರ ವ್ಯಾಪ್ತಿಗೆ ಬರುವ ಕೊಡಿಗೇಹಳ್ಳಿ ರೈಲ್ವೆ ಅಂಡರ್ಪಾಸ್ ಮಳೆ ನೀರು ತುಂಬಿ, ಬಂದ್ ಆಗಿದೆ. ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಡಿಗೇಹಳ್ಳಿಯಿಂದ ತಿಂಡ್ಲುಗೆ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್ ರಸ್ತೆ ಇದಾಗಿದ್ದು, ಬಸ್, ಕಾರು, ಬೈಕ್ ಸೇರಿದಂತೆ ಸಾವಿರಾರು ವಾಹನಗಳು ನಿತ್ಯ ಸಂಚರಿಸುತ್ತವೆ. ಕಳಪೆ ಕಾಮಗಾರಿಯಿಂದಾಗಿ ಮಳೆ ನೀರು ಹೊರ ಹೋಗುವ ಪೈಪ್ಗಳು ಬ್ಲಾಕ್ ಆಗಿದ್ದು, ನೀರು ಶೇಖರಣೆಯಾಗಿ ಅಂಡರ್ ಪಾಸ್ ಕೆರೆಯಂತಾಗಿದೆ.
ಕೆಟ್ಟು ನಿಂತ ವಾಹನಗಳು:
ಮಳೆ ನೀರು ತುಂಬಿರುವ ಅಂಡರ್ ಪಾಸ್ ಮೂಲಕ ಸಂಚರಿಸಲು ಪ್ರಯತ್ನಿಸಿದ ಬೈಕ್, ಸ್ಕೂಟಿ, ಒಮಿನಿ ಸೇರಿದಂತೆ ನೂರಾರು ವಾಹನಗಳು ಕೆಟ್ಟು ನಿಂತಿವೆ. ಕಳೆದೆರಡು ದಿನಗಳಿಂದಲೂ ಇದೇ ಸಮಸ್ಯೆಯಾಗಿದ್ದು, ಯಾವೊಬ್ಬ ಅಧಿಕಾರಿಯೂ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ವಾಹನ ಸವಾರರ ಪರದಾಟ:
ಅಂಡರ್ ಪಾಸ್ ನೀರಿನಿಂದ ಅಸ್ತವ್ಯಸ್ತಗೊಂಡಿದ್ದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಕೊಡಿಗೇಹಳ್ಳಿಯಿಂದ ತಿಂಡ್ಲುಗೆ ಹೋಗಬೇಕಾದರೆ, ಅನಗತ್ಯವಾಗಿ ಸುಮಾರು 2 ಕಿ.ಮೀ ಸುತ್ತಬೇಕು. ಆದರೀಗ, ಬದಲಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಮತ್ತು ಬದಲಿ ಮಾರ್ಗ ಅನುಸರಿಸಬೇಕಾಗಿರುವುದರಿಂದ ಸುಮಾರು 3ಕಿ.ಮೀ ಸುತ್ತು ಹಾಕಿ ಬರಬೇಕಿದೆ ಎಂದು ವಾಹನ ಸವಾರರೊಬ್ಬರು ದೂರಿದ್ದಾರೆ.
ಕಾರ್ಪೋರೇಟರ್ ಪತ್ತೆ ಇಲ್ಲ:
ಕಳೆದ 5ವರ್ಷಗಳ ಹಿಂದೆ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಅಂದು ಶುರುವಾದ ಧೂಳು, ನೀರು, ಒಳಚರಂಡಿ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಕೊಡಿಗೇಹಳ್ಳಿ ಕಾರ್ಪೊರೇಟರ್ ಚೇತನ್ ಅವರ ಬಳಿ ದೂರು ನೀಡಲು ಹೋದರೆ ಕೈಗೆ ಸಿಗುವುದಿಲ್ಲ ಎಂಬುದು ಸ್ಥಳೀಯರ ಆರೋಪ. ಪೋನ್ ಮಾಡಿದರೂ ರಿಸೀವ್ ಮಾಡುವುದಿಲ್ಲ ಎಂಬ ಆರೋಪವೂ ಇದೆ.
ಮಳೆ ನೀರಿನ ಜೊತೆ ಕೊಳಚೆ ನೀರು ಸೇರಿಕೊಳ್ಳುವ ಪರಿಣಾಮ ಇಲ್ಲಿ ಸಂಚರಿಸುವ ವಾಹನ ಸವಾರರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂಬುದು ಜನರ ಆಗ್ರಹವಾಗಿದೆ.