ಬೆಂಗಳೂರು : ನೋವೆಲ್ ಕೊರೊನಾ ವೈರಸ್ ಎಂಟ್ರಿ ಕೊಟ್ಟು ವರ್ಷವೇ ಕಳೆದಿದೆ. ಇತ್ತ ವೈರಸ್ ವಿರುದ್ಧ ಹೋರಾಡಲು ಕೋವಿಡ್ ಲಸಿಕೆ ಕೂಡ ಬಂದಿದೆ. ಮೊದಲ ಹಂತವಾಗಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಹಾಗೆಯೇ ಹಿರಿಯ ನಾಗರಿಕರಿಗೂ ಲಸಿಕೆ ನೀಡಲಾಗುತ್ತಿದೆ. ಇದೀಗ ಜನರಲ್ಲಿ ಕೋವಿಡ್ ಲಸಿಕೆ ಕುರಿತು ಗೊಂದಲಗಳು ಶುರುವಾಗಿವೆ.
ಅದರಲ್ಲೂ ಕಿಡ್ನಿ ವೈಫಲ್ಯ, ಹೃದಯ ಸಮಸ್ಯೆ, ಸ್ಟೆಂಟ್ ಅಳವಡಿಕೆ ಸೇರಿದಂತೆ ನಾನಾ ಅನಾರೋಗ್ಯ ಸಮಸ್ಯೆವುಳ್ಳವರು ಕೊರೊನಾ ಲಸಿಕೆ ಹಾಕಿಸಿಕೊಳ್ಳಬಹುದಾ ಬೇಡ್ವಾ ಎಂಬ ಪ್ರಶ್ನೆ ಮೂಡಿದೆ. ಹೀಗಾಗಿ, ಬಹಳಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಈ ಸಂಬಂಧ ಲಸಿಕೆ ಕುರಿತಾದ ಅನುಮಾನ ಕುರಿತು ಯುರಾಲಜಿ ತಜ್ಞರಾದ ಡಾ. ಸೂರ್ಯರಾಜು ಸಂದೇಹ ಬಗೆಹರಿಸಿದ್ದಾರೆ.
ಇವತ್ತಿನ ದಿನ ಕಿಡ್ನಿ ವೈಫಲ್ಯ ಸಮಸ್ಯೆ ಇರುವವರು ಹೆಚ್ಚು ಜನರಿದ್ದಾರೆ. ಈಗೀನ ಕೋವಿಡ್ ಪರಿಸ್ಥಿತಿಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕೋ ಬೇಡ್ವೋ ಎಂಬ ಗೊಂದಲ ಇದೆ. ಕೋವಿಡ್ ಸೋಂಕಿನ ಪ್ರಕರಣದಲ್ಲಿ ಏರಿಳಿತ ಕಂಡು ಬರುತ್ತಿದೆ.
ಕೊರೊನಾ ಹೋಗಲಾಡಿಸಬೇಕು ಅಂದರೆ ಲಸಿಕೆಯನ್ನ ಎಲ್ಲರೂ ಹಾಕಿಸಿಕೊಳ್ಳಬೇಕು. ಕಿಡ್ನಿ ಸಮಸ್ಯೆ, ವೈಫಲ್ಯ ಇರುವ ರೋಗಿಗಳು ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಇಂತಹ ರೋಗಿಗಳು ಲಸಿಕೆ ಹಾಕಿಸಿಕೊಳ್ಳುವುದು ಉತ್ತಮ.
ಯಾಕೆಂದರೆ, ಕೋವಿಡ್ ಸೋಂಕು ತಗುಲಿದರೆ ರಿಕವರಿ ಆಗುವುದು ಕೂಡ ಕಷ್ಟವಾಗಿರುತ್ತೆ. ಹಾಗೇ ಸಾವಿನ ಪ್ರಮಾಣವೂ ಹೆಚ್ಚಾಗಿರುತ್ತೆ. ಹೀಗಾಗಿ, ಇದನ್ನ ತಡೆಯಬೇಕಾದರೆ, ಸುರಕ್ಷಿತ ದೃಷ್ಟಿಯಿಂದ ಯಾವುದೇ ಆತಂಕವಿಲ್ಲದೇ ಲಸಿಕೆ ಪಡೆಯೋದು ಒಳ್ಳೆಯದು ಅಂತಾ ಸಲಹೆ ನೀಡಿದ್ದಾರೆ.
ಅನಾರೋಗ್ಯ ಸಮಸ್ಯೆ ಹಿನ್ನೆಲೆ ಔಷಧಿಯನ್ನ ತೆಗೆದುಕೊಳ್ಳುತ್ತಿದ್ದರೂ ಅಂತಹವರು ಲಸಿಕೆ ಹಾಕಿಸಿಕೊಳ್ಳಲು ಯಾವುದೇ ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿದರು. ಲಸಿಕೆ ಪಡೆದ ನಂತರವೂ ನಿತ್ಯ ತೆಗೆದುಕೊಳ್ಳುವ ಔಷಧಿಯನ್ನ ತೆಗೆದುಕೊಳ್ಳಬಹುದಾಗಿದೆ.
ಈವರೆಗೆ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ 4,83,047 ಮಂದಿ ಎರಡನೇ ಡೋಸ್ 2,86,266 ಪಡೆದಿದ್ದಾರೆ. ಮುಂಚೂಣಿ ಕಾರ್ಯಕರ್ತೆಯರು ಮೊದಲ ಡೋಸ್ನ 1,75,138 ಮಂದಿ, ಎರಡನೇ ಡೋಸ್ನಲ್ಲಿ 16,193 ಕಾರ್ಯಕರ್ತೆಯರು ಲಸಿಕೆ ಹಾಕಿಸಿಕೊಂಡಿದ್ದಾರೆ.
ಇತ್ತ ಅನಾರೋಗ್ಯ ಸಮಸ್ಯೆವುಳ್ಳ 45-60 ವರ್ಷದ 62,203 ಮಂದಿ ಹಾಗೂ 60 ವರ್ಷ ದಾಟಿದ 3,17,695 ಹಿರಿಯ ನಾಗರಿಕರು ಲಸಿಕೆ ಹಾಕಿಸಿಕೊಂಡಿದ್ದಾರೆ. ರಾಜ್ಯದಲ್ಲಿ 13,40, 542 ರಷ್ಟು ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.