ಬೆಂಗಳೂರು : ರಾಜ್ಯದಲ್ಲಿ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್(ಎಮ್ಎಸ್ಐಎಲ್) ಮದ್ಯದ ಮಳಿಗೆಗಳನ್ನು ತೆರೆಯುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಬಾರ್ ಮಾಲೀಕರು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.
ಅಬಕಾರಿ ನಿಯಮ 3(11) ಉಲ್ಲಂಘಿಸಿ ರಾಜ್ಯ ಸರ್ಕಾರ ಎಮ್ಎಸ್ಐಎಲ್ ಮದ್ಯದ ಮಳಿಗೆಗಳನ್ನು ತೆರೆಯಲು ಪರವಾನಿಗೆ ನೀಡಿದೆ ಎಂದು ಆರೋಪಿಸಿ ಉತ್ತರ ಕರ್ನಾಟಕ ಭಾಗದ ಹಲವು ಖಾಸಗಿ ಮದ್ಯದ ಅಂಗಡಿಗಳ ಮಾಲೀಕರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠ, ಬಾರ್ ಮಾಲೀಕರ ಮನವಿ ವಜಾಗೊಳಿಸಿ, ಸರ್ಕಾರದ ನಿರ್ಣಯವನ್ನು ಎತ್ತಿ ಹಿಡಿದಿದೆ.
ವಿಚಾರಣೆ ವೇಳೆ ಎಮ್ಎಸ್ಐಎಲ್ ಪರ ವಾದಿಸಿದ್ದ ವಕೀಲರು, ಒಂದು ಪ್ರದೇಶದ ಜನಸಂಖ್ಯೆ ಆಧರಿಸಿ ಮದ್ಯದ ಮಳಿಗೆಗಳಿಗೆ ಪರವಾನಿಗೆ ನೀಡಬೇಕು. ಅದರಂತೆ ಎಮ್ಎಸ್ಐಎಲ್ಗೆ ಮಳಿಗೆಗಳನ್ನು ತೆರೆಯಲು ಸರ್ಕಾರ ಸಮ್ಮತಿಸಿದೆ. ಈ ವೇಳೆ ಎಮ್ಎಸ್ಐಎಲ್ಗೆ ಲೈಸೆನ್ಸ್ ನೀಡುವಾಗ ಅಕ್ಕಪಕ್ಕದ ಮದ್ಯದಂಗಡಿಗಳ ಪರವಾನಿಗೆ ರದ್ದುಪಡಿಸಿಲ್ಲ. ಹೀಗಾಗಿ, ಎಮ್ಎಸ್ಐಎಲ್ಗೆ ಲೈಸೆನ್ಸ್ ನೀಡುವ ನಿರ್ಧಾರವನ್ನು ಪ್ರಶ್ನಿಸುವ ಅಧಿಕಾರ ಬಾರ್ ಮಾಲೀಕರಿಗೆ ಇಲ್ಲ ಎಂದು ಸಮರ್ಥಿಸಿದ್ದರು.
ವಾದ-ಪ್ರತಿವಾದವನ್ನು ಪರಿಗಣಿಸಿದ ಪೀಠ, ಕರ್ನಾಟಕ ಅಬಕಾರಿ ಕಾಯ್ದೆ-1965 ಹಾಗೂ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು-1968ರ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರ ಮದ್ಯದ ಮಳಿಗೆಗಳಿಗೆ ಅನುಮತಿ ನೀಡುವ ಅಧಿಕಾರ ಹೊಂದಿದೆ. ಇನ್ನು, ಮದ್ಯ ಮಾರಾಟ ಮಾಡುವುದು ಮೂಲಭೂತ ಹಕ್ಕಲ್ಲ ಎಂದು ಅಭಿಪ್ರಾಯಪಟ್ಟು, ಬಾರ್ ಮಾಲೀಕರ ಅರ್ಜಿಗಳನ್ನು ವಜಾಗೊಳಿಸಿದೆ.