ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಹೆಸರಿನಲ್ಲಿ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ಪಡೆಯುವ ಕಾರ್ಯವನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾಡುತ್ತಿದ್ದಾರೆ. ಪ್ರತಿದಿನ ತಮ್ಮ ಸದಾಶಿವನಗರ ನಿವಾಸಕ್ಕೆ ಕೆಲ ನಾಯಕರನ್ನು ಕರೆಸಿಕೊಂಡು ಚರ್ಚಿಸುವ ಮೂಲಕ ಪರೋಕ್ಷವಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾಯಕತ್ವ ವಹಿಸುವ ಮಾತನಾಡಿದವರಿಗೆ ಸೂಕ್ತ ಸಂದೇಶ ರವಾನೆ ಮಾಡುವ ಕಾರ್ಯ ಮಾಡುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗುವ ಸಂದರ್ಭದಲ್ಲಿ ತಮ್ಮನ್ನು ಮುಂಬರುವ ಚುನಾವಣೆಯಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಮಾಡುವಂತೆ ಮನವಿ ಮಾಡಿರುವ ಅವರು, ಇದಕ್ಕೆ ಹೈಕಮಾಂಡ್ ನಾಯಕರಿಂದ ಸಮ್ಮತಿ ಪಡೆದು ಬಂದು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂಬ ಮಾತಿದೆ.
ಕಳೆದ ಒಂದು ವರ್ಷದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಅವರು, ಇದಕ್ಕಾಗಿ ಸಾಕಷ್ಟು ಹಣವನ್ನು ವ್ಯಯಿಸಿದ್ದಾರೆ. ಆದರೆ, ಚುನಾವಣೆಗೆ ಎರಡು ವರ್ಷ ಮುನ್ನವೇ ಪಕ್ಷದ ಹಿರಿಯ ನಾಯಕರು ತಾವೇ ಮುಂದಿನ ಸಿಎಂ ಎಂದು ಖುದ್ದಾಗಿ ಹಾಗೂ ಬೆಂಬಲಿಗರ ಮೂಲಕ ಹೇಳುವ ಪ್ರಯತ್ನ ಮಾಡುತ್ತಿರುವುದು ಡಿಕೆಶಿ ಮಹತ್ವಾಕಾಂಕ್ಷೆಯ ಪ್ರಯತ್ನಕ್ಕೆ ಹೊಡೆತ ಕೊಟ್ಟಿದೆ ಎನ್ನಲಾಗುತ್ತಿದೆ.
ಇದರಿಂದಲೇ ಪಕ್ಷದ ಕಚೇರಿ ಬದಲು ತಮ್ಮ ನಿವಾಸಕ್ಕೆ ರಾಜ್ಯದ ವಿವಿಧ ಜಿಲ್ಲೆಯ ನಾಯಕರನ್ನು ಕರೆಸಿಕೊಂಡು ಚರ್ಚಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ದಿನದಿಂದ ದಿನಕ್ಕೆ ಪಕ್ಷದಲ್ಲಿ ನಾಯಕತ್ವ ವಹಿಸಿಕೊಳ್ಳುತ್ತಿರುವವರ ಹೆಸರುಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಪಕ್ಷದಲ್ಲಿ ತಮ್ಮ ಪರವಾಗಿರುವ ನಾಯಕರ ಪಟ್ಟಿ ಸಿದ್ಧಪಡಿಸಿಕೊಳ್ಳಲು ಡಿಕೆಶಿ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಹೈಕಮಾಂಡ್ ಖಡಕ್ ಸೂಚನೆ : ಯಾವುದೇ ಕಾರಣಕ್ಕೂ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ನಾಯಕರ ಅಥವಾ ಕಾರ್ಯಕರ್ತರ ಬಾಯಲ್ಲಿ ಮುಂದಿನ ಸಿಎಂ ವಿಚಾರ ಪ್ರಸ್ತಾಪ ಆಗಬಾರದು ಎಂದು ಹೈಕಮಾಂಡ್ ಸೂಚನೆ ನೀಡಿದೆ. ಈ ಹಿನ್ನೆಲೆ ಯಾವೊಬ್ಬ ನಾಯಕರು ಹೇಳಿಕೆ ನೀಡುತ್ತಿಲ್ಲ. ಆದರೆ, ತೆರೆಮರೆಯಲ್ಲಿ ತಮ್ಮದೇ ಆದ ಪ್ರಯತ್ನ ಮುಂದುವರಿಸಿದ್ದಾರೆ. ಪಕ್ಷದ ಹೈಕಮಾಂಡ್ ನಾಯಕರ ಸೂಚನೆ ಹಿನ್ನೆಲೆ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಕ್ಷೇತ್ರದಲ್ಲಿದ್ದಾರೆ.
ತಮ್ಮ ಸ್ಥಾನ ಬಲಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅದೇ ರೀತಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಇನ್ನೊಂದು ವಾರದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ದಿಲ್ಲಿಗೆ ತೆರಳಲಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ತಮ್ಮನ್ನು ತಾವು ಪ್ರತಿಪಾದಿಸಿಕೊಳ್ಳಬೇಕು ಎಂದು ಡಿಕೆ ಶಿವಕುಮಾರ್, ತಮ್ಮ ನಿವಾಸಕ್ಕೆ ಆಯ್ದ ನಾಯಕರನ್ನು ಕರೆಸಿಕೊಂಡು ಚರ್ಚಿಸುವ ಮೂಲಕ ಪರೋಕ್ಷವಾಗಿ ತಮ್ಮ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಮುಂಬರುವ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟಗಳು, ಪಕ್ಷದ ವಿವಿಧ ಸಮಿತಿಗಳಿಗೆ ತಮ್ಮ ಆಪ್ತರ ನೇಮಕ, ರಾಜ್ಯಾದ್ಯಂತ ವಿವಿಧ ಮುಖಂಡರಿಗೆ ಹತ್ತು ಹಲವು ಬಗೆಯ ಜವಾಬ್ದಾರಿ ನೀಡುವುದು, ಪಕ್ಷ ಸಂಘಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು, ಪಕ್ಷದ ವಿವಿಧ ನಾಯಕರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಶಿವಕುಮಾರ್ ಮುಂದಾಗಿದ್ದಾರೆ. ಈ ಎಲ್ಲಾ ಪ್ರಯತ್ನಗಳ ಮೂಲಕ ರಾಜ್ಯದಲ್ಲಿ ಹೆಚ್ಚಿನ ಕಾಂಗ್ರೆಸ್ ನಾಯಕರ ಬೆಂಬಲ ತಮಗಿದೆ ಎಂಬುದನ್ನು ತೋರಿಸಿಕೊಳ್ಳುವ ಯತ್ನಕ್ಕೆ ಮುಂದಾಗಿದ್ದಾರೆ.
ಪಕ್ಷದಲ್ಲಿ ಘಟಾನುಘಟಿ ನಾಯಕರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಹೆಚ್ ಕೆ ಪಾಟೀಲ್, ಜಿ.ಪರಮೇಶ್ವರ್, ಕೆ ಹೆಚ್ ಮುನಿಯಪ್ಪ ಮತ್ತಿತರೆ ನಾಯಕರು ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಎಷ್ಟರಮಟ್ಟಿಗೆ ಡಿ ಕೆ ಶಿವಕುಮಾರ್ ತಂತ್ರ ಫಲ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.