ಬೆಂಗಳೂರು: ಉಪ ಚುನಾವಣಾ ಪ್ರಚಾರದ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಇದೀಗ ಮೊಣಕಾಲು ನೋವು ಕಾಣಿಸಿಕೊಂಡಿದೆ. ಹೀಗಾಗಿ, ಕುಂಟುತ್ತಲೇ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಫಿಜಿಯೋಥೆರಪಿ ಚಿಕಿತ್ಸೆ ಜೊತೆಗೆ ಕಾಲಿನ ವ್ಯಾಯಾಮ ಮಾಡವಂತೆ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿದ್ದ ಬೊಮ್ಮಾಯಿ, ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಆಖಾಡದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದರು. ಚುನಾವಣಾ ಪ್ರಚಾರದ ವೇಳೆ ಮೊಣಕಾಲಿಗೆ ಬಾರಿ ಪೆಟ್ಟು ಬಿದ್ದಿದ್ದು, ಕಾಲಿಗೆ ಬಿದ್ದಿದ್ದ ಪೆಟ್ಟನ್ನು ಕಡೆಗಣಿಸಿ ಪ್ರಚಾರ ಮುಂದುವರೆಸಿದ್ದರು. ಉಪ ಚುನಾವಣೆ ನಂತರ ಪುನೀತ್ ರಾಜ್ಕುಮಾರ್ ಅವರ ಅಂತ್ಯ ಸಂಸ್ಕಾರ ಮುಗಿಯುವವರೆಗೂ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದು, ಕಾಲಿನ ಆರೈಕೆ ಸಾಧ್ಯವಾಗಿರಲಿಲ್ಲ.
ಕುಂಟುತ್ತಲೇ ಕಾರ್ಯಕ್ರಮಗಳಲ್ಲಿ ಭಾಗಿ
ಸಿಎಂಗೆ ಮೊಣಕಾಲಿನ ನೋವು ಹೆಚ್ಚಾಗಿ ಬಾಧಿಸುತ್ತಿದೆ. ಕಳೆದ ಎಂಟ್ಹತ್ತು ದಿನಗಳಿಂದ ನಿರಂತರ ಮೊಣಕಾಲು ನೋವು ಅನುಭವಿಸುತ್ತಲೇ ವಿಧಾನಸೌಧ ಸೇರಿದಂತೆ ಎಲ್ಲಾ ಕಡೆ ಕುಂಟುತ್ತಲೇ ಕಾರ್ಯಕ್ರಮಗಳನ್ನು ಮುಗಿಸುತ್ತಿದ್ದಾರೆ. ಜಿಲ್ಲಾ ಪ್ರವಾಸವನ್ನೂ ಕೈಗೊಳ್ಳುತ್ತಿದ್ದಾರೆ.
ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಮೊಣಕಾಲಿಗೆ ಫಿಸಿಯೋಥೆರಪಿ ಚಿಕಿತ್ಸೆ ಹಾಗೂ ವ್ಯಾಯಾಮ ಮಾಡುವಂತೆ ವೈದ್ಯರು ಸಲಹೆ ನೀಡಿದ್ದು, ನಿತ್ಯವು ವೈದ್ಯರ ಸೂಚನೆ ಮೇರೆಗೆ ಫಿಸಿಯೋಥೆರಪಿ ಹಾಗೂ ವ್ಯಾಯಾಮದ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.