ಬೆಂಗಳೂರು: ಕೊರೊನಾ ವೈರಸ್ ಹರಡದಂತೆ ಪ್ರತಿ ಭಾನುವಾರ ಸಂಪೂರ್ಣ ಲಾಕ್ಡೌನ್ ನಿಯಮ ಜಾರಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಏನೇನು ಇರಲಿದೆ ಎಂಬುದರ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೆ ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಎಂದಿನಂತೆ ಆಸ್ಪತ್ರೆ, ಮೆಡಿಕಲ್ ಶಾಪ್, ದಿನಸಿ ಅಂಗಡಿ, ಹಣ್ಣಿನ ಅಂಗಡಿ, ತರಕಾರಿ, ಮಾಂಸದಂಗಡಿಗಳು ತೆರೆದಿರಲಿವೆ. ಫುಡ್ ಹೋಮ್ ಡೆಲಿವರಿಗೆ ಅವಕಾಶವಿದೆ. ಬಾರ್ಗಳು ತೆರೆಯುವುದಿಲ್ಲ. ಅಲ್ಲದೆ ಅಗತ್ಯ ಸಂದರ್ಭಗಳಲ್ಲಿ ಮಾತ್ರ ವಾಹನದ ಮೂಲಕ ಹೊರ ಬರಬಹುದು. ಇದಕ್ಕೆ ಯಾವುದೇ ಪಾಸ್ನ ಅಗತ್ಯವಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
ಇನ್ನು ಅಗತ್ಯ ಸೇವೆ ನೀಡುವ ವಾಹನಗಳಿಗೆ ವಿನಾಯಿತಿ ಕಲ್ಪಿಸಲಾಗಿದೆ. ಮೊದಲ ಎರಡು ಹಂತದ ಲಾಕ್ ಡೌನ್ ಅವಧಿಯಲ್ಲಿ ಇದ್ದ ನಿಯಮಗಳೇ ಜಾರಿಯಾಗಲಿವೆ. ನಾಗರಿಕರು ನಗರದಲ್ಲಿ ಸುಖಾಸುಮ್ಮನೆ ಹೊರಗೆ ಬರಬಾರದು. ಕಾನೂನು ಮೀರಿ ವರ್ತಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ನಿಗದಿಯಾಗಿರುವ ಮದುವೆ ಸಮಾರಂಭಗಳು ನಡೆಸಲು ಯಾವುದೇ ಅಡ್ಡಿಯಿಲ್ಲ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ನಾಗರಿಕರಲ್ಲಿ ಆಯುಕ್ತರು ಮನವಿ ಮಾಡಿದ್ದಾರೆ.