ಬೆಂಗಳೂರು: ಸ್ವಪಕ್ಷೀಯ ಶಾಸಕನ ನಿವಾಸದ ಮೇಲೆ ದಾಳಿ ನಡೆದಿರುವ ಜೊತೆಗೆ ಮಹಾ ನಗರದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದ್ದರೂ ಕಾಂಗ್ರೆಸ್ ನಾಯಕರು ಮೌನವಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರಳಿಯ ಅವಹೇಳನಕಾರಿ ಬರಹ ಪೋಸ್ಟ್ ಮಾಡಿದ ಕಾರಣದಿಂದಾಗಿ ಅಲ್ಪಸಂಖ್ಯಾತ ಸಮುದಾಯದವರು ಶಾಸಕರ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಅಲ್ಲದೇ ಸಾರ್ವಜನಿಕ ವಾಹನಗಳನ್ನು ಜಖಂಗೊಳಿಸಿದ್ದಾರೆ. ರಾತ್ರಿ ಇಡೀ ಸಾಕಷ್ಟು ಘಟನೆಗಳು ನಡೆದಿದ್ದು, ಪೊಲೀಸರ ಗುಂಡಿಗೆ ಮೂವರು ಬಲಿಯಾಗಿದ್ದಾರೆ. ನಗರದಲ್ಲಿ 144ನೇ ಸೆಕ್ಷನ್ ಜಾರಿಯಲ್ಲಿದ್ದು, ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾಂಗ್ರೆಸ್ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಕೇವಲ ಶಾಸಕ ಜಮೀರ್ ಅಹಮದ್ ಖಾನ್ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದನ್ನು ಹೊರತುಪಡಿಸಿದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗಲಿ ಅಥವಾ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗಲಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಎರಡು ಸಮುದಾಯಗಳ ನಡುವೆ ತಡರಾತ್ರಿ ನಡೆದ ಘರ್ಷಣೆಯ ಮಾಹಿತಿ ಇದ್ದು, ಕಾಂಗ್ರೆಸ್ ನಾಯಕರು ಮೌನವಾಗಿರುವುದು ಹಲವರ ಟೀಕೆಗೂ ಅವಕಾಶ ಮಾಡಿಕೊಟ್ಟಿದೆ. ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು, ಯಾರೂ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಈ ನೆಲದ ಕಾನೂನಿಗೆ ಎಲ್ಲರೂ ಗೌರವ ಕೊಡಲೇಬೇಕು. ಪ್ರಚೋದನೆಗೊಳಗಾಗಿ ಹಿಂಸಾಕೃತ್ಯದಲ್ಲಿ ತೊಡಗುವುದು ಅಕ್ಷಮ್ಯ. ಪೊಲೀಸರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಪ್ರವಾದಿ ಪೈಗಂಬರ್ ಬಗ್ಗೆ ನಿಂದಾನಾತ್ಮಕವಾಗಿ ಯಾರೇ ಬರೆದಿದ್ದರೂ ಅದನ್ನು ನಾನು ಖಂಡಿಸುತ್ತೇನೆ. ಅದು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಕೆಲ ಕಿಡಿಗೇಡಿಗಳ ಕೆಲಸ. ಆದರೆ ಪುಲಕೇಶಿ ನಗರದಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲಿನ ದಾಳಿ ಮತ್ತು ಪೊಲೀಸ್ ಠಾಣೆಯ ಮೇಲಿನ ದಾಳಿ ದುರದೃಷ್ಟಕರ ಎಂದಿದ್ದಾರೆ.
ಜಮೀರ್ ಅಹ್ಮದ್ ಖಾನ್ ಟ್ವೀಟ್ ನಲ್ಲಿ, ಕಾವಲಭೈರಸಂದ್ರದಲ್ಲಿ ನಡೆಯುತ್ತಿರುವ ಘಟನೆ ದುರದೃಷ್ಟಕರ. ತಪ್ಪಿತಸ್ಥರ ವಿರುದ್ಧ ಪೊಲೀಸರು ಖಂಡಿತ ಕ್ರಮಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ. ಈ ಸಂದರ್ಭದಲ್ಲಿ ಜನ ಆವೇಶಕ್ಕೆ ಒಳಗಾಗದೇ ಸಂಯಮದಿಂದ ಶಾಂತಿ ಕಾಪಾಡಬೇಕೆಂದು ಮನವಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದನ್ನು ಹೊರತುಪಡಿಸಿದರೆ ಪಕ್ಷದ ಯಾವೊಬ್ಬ ನಾಯಕರು ಇದುವರೆಗೂ ನಿನ್ನೆ ತಡರಾತ್ರಿಯ ಗಲಭೆ ಸಂಬಂಧ ಪ್ರತಿಕ್ರಿಯೆ ನೀಡಿಲ್ಲ.
ಘಟನೆ ನಡೆದ ಸ್ಥಳದಲ್ಲಿ ಪ್ರಕ್ಷುಬ್ಧಗೊಂಡವರನ್ನು ಸಮಾಧಾನಗೊಳಿಸಲು ತೆರಳಿದ್ದ ಸಚಿವ ಜಮೀರ್ ಅಹಮದ್ ಕೈಗೆ ಕೂಡ ಗಾಯವಾಗಿದೆ. ಇನ್ನು ಖುದ್ದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕೂಡ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದು, ಗಲಾಟೆ ನಡೆಸದಂತೆ ಮನವಿ ಮಾಡಿಕೊಂಡಿದ್ದಾರೆ.
ಆದರೆ, ಇದಕ್ಕೆ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗದೇ ದೊಡ್ಡಮಟ್ಟದ ಗಲಾಟೆ ನಡೆದಿದೆ. ಇಂತಹದ್ದೊಂದು ಗಲಾಟೆ ನಡೆದಿದ್ದರೂ ಕಾಂಗ್ರೆಸ್ ನಾಯಕರು ಇದುವರೆಗೂ ಮೌನವಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.