ಬೆಂಗಳೂರು: ಅಧಿಕಾರದಲ್ಲಿರುವವರಿಗೆ ಮತ್ತು ಅತೀ ಶ್ರೀಮಂತರಿಗೆ ಗೌರವ ಹೆಚ್ಚು. ಆದ್ರೆ ದಿ. ಡಾ. ಆರ್ ಎನ್. ಶೆಟ್ಟಿಯವರ ಸಮಾಜ ಸೇವೆಯನ್ನು ಗುರುತಿಸಿ ಅವರ ಪ್ರತಿಮೆ ಅನಾವರಣೆಗೊಳಿಸಿರುವುದು ಶ್ಲಾಘನೀಯ. ಅವರ ಸಾಧನೆ, ಸಮಾಜ ಸೇವೆಯನ್ನು ಗುರುತಿಸಿ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಬೆಂಗಳೂರಿನ ಬಂಟರ ಸಂಘದ ಆವರಣದಲ್ಲಿ ದಿ. ಡಾ. ಆರ್.ಎನ್. ಶೆಟ್ಟಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ಮಾತನಾಡಿದ ಅವರು, ಆರ್.ಎನ್. ಶೆಟ್ಟಿ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯ. ಹೆಚ್ಚು ಓದಿಲ್ಲದಿದ್ರೂ ತಮ್ಮ ಅನುಭವಗಳಿಂದ ಯಶಸ್ಸನ್ನು ಸಾಧಿಸಿದ್ದರು. ಜೊತೆಗೆ ದಾನ - ಧರ್ಮಗಳ ಮೂಲಕ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿದ್ದರು. ಇಂತಹ ಸಮಾಜ ಸೇವಕರನ್ನು ಗುರುತಿಸುವ ಕಾರ್ಯ ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಇದೇ ವೇಳೆ, ದಿ. ಡಾ.ಆರ್.ಎನ್.ಎಸ್. ಶೆಟ್ಟಿ ಸ್ಮಾರಕ ಔದ್ಯಮಿಕ ಸಾಧಕ ಪ್ರಶಸ್ತಿಯನ್ನು ಮುಂಬೈನ ಹೇರಂಬ ಇಂಡಸ್ಟ್ರೀಸ್ನ ಚೇರ್ಮನ್ ಸದಾಶಿವ ಕೆ.ಶೆಟ್ಟಿ ಅವರಿಗೆ ಮತ್ತು ದಿ. ಸುಶೀಲಾ ಪಿ.ಶೆಟ್ಟಿ ಸ್ಮಾರಕ ಮಹಿಳಾ ಸಾಧಕಿ ಪ್ರಶಸ್ತಿಯನ್ನು ಕರ್ನಾಟಕ ಮಹಿಳಾ ದಕ್ಷತ ಸಮಿತಿಯ ಅಧ್ಯಕ್ಷರಾದ ಶರಣ್ಯ ಎಸ್. ಹೆಗ್ಗೆ ಅವರಿಗೆ ನೀಡಿ ಗೌರವಿಸಲಾಯಿತು.
ಗಿರೀಶ್ ರೈ ಬರೆದಿರುವ ಪ್ರಜಾಪ್ರಭುತ್ವ- ಬಂಟ ಜನಪ್ರತಿನಿಧಿಗಳು ಎಂಬ ಪುಸ್ತಕವನ್ನು ನಿವೃತ್ತ ಲೋಕಾಯುಕ್ತರಾದ ಎಸ್. ಸಂತೋಷ್ ಹೆಗ್ಡೆ ಅವರು ಬಿಡುಗಡೆಗೊಳಿಸಿದರು. ಅಲ್ಲದೆ, ಕಾರ್ಯಕ್ರಮದಲ್ಲಿ ಕರಾವಳಿಯ ಬಿಸು ಪರ್ಬ (ಯುಗಾದಿ) ಆಚರಣೆಯನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗೌರವ ಆತಿಥಿಯಾಗಿ ಜಸ್ಟೀಸ್ ಎಸ್. ವಿಶ್ವಜಿತ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ, ಗೌರವ ಕಾರ್ಯದರ್ಶಿ ಮಧುಕರ ಎಮ್. ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಅಧಿಕಾರದ ಬಗ್ಗೆ ಕುಮಾರಸ್ವಾಮಿ ಹಗಲುಗನಸು ಕಾಣುತ್ತಿದ್ದಾರೆ: ನಳೀನ್ ಕುಮಾರ್ ಕಟೀಲ್