ಬೆಂಗಳೂರು : ಸಂವಿಧಾನ ಧರ್ಮಕ್ಕಿಂತ ದೊಡ್ಡದು ಎಂದು ಹೈಕೋರ್ಟ್ ತೀರ್ಪು ಸಾಬೀತು ಮಾಡಿದೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಭಾರತ ಸಂವಿಧಾನದ ಮೇಲೆ ನಂಬಿಕೆ ಇರುವವರೆಲ್ಲರೂ ಈ ತೀರ್ಪನ್ನು ಗೌರವಿಸಬೇಕು. ಇನ್ನು ಮುಂದೆ ಅನಗತ್ಯವಾಗಿ ವಿವಾದ ಮಾಡಬಾರದು. ಧರ್ಮ ನಿರಪೇಕ್ಷಿತವಾಗಿ ಸ್ವಾಗತ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತೇವೆ ಎಂದರು. ಇನ್ನೂ ಈ ವಿಷಯವನ್ನು ಇಲ್ಲಿಗೆ ಬಿಡಬೇಕು, ಇದನ್ನು ಮುಂದುವರಿಸಬಾರದು ಎಂದು ತಿಳಿಸಿದರು.
ತೀರ್ಪಿನಿಂದ ಕಾಂಗ್ರೆಸ್ಸಿಗರಿಗೆ ಕಪಾಳ ಮೋಕ್ಷ : ಹಿಜಾಬ್ ವಿವಾದದ ತೀರ್ಪಿನಿಂದ ಕಾಂಗ್ರೆಸ್ ಮುಖಂಡರಿಗೆ ಕಪಾಳ ಮೋಕ್ಷ ಆಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಹಲವು ಸಂಘನಟನೆಗಳು ವಿನಾಕಾರಣ ಹಿಜಾಬ್ ಮೂಲಭೂತ ಹಕ್ಕು ಎಂದು ಶಾಂತಿ ಕದಡುವ ಪ್ರಯತ್ನ ಮಾಡಿದ್ದವು. ಶಿಕ್ಷಣದಿಂದ ವಂಚಿತರಾದರೆ ಭಯೋತ್ಪಾದಕರನ್ನಾಗಿ ಬಳಸಿಕೊಳ್ಳುವ ಚಿಂತನೆ ನಡೆದಿತ್ತು. ಕೋರ್ಟ್ ಸರ್ಕಾರದ ನಿಲುವನ್ನು ಎತ್ತಿ ಹಿಡಿದಿದೆ ಎಂದರು.
ಸಮವಸ್ತ್ರ ಕಡ್ಡಾಯ ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಕೋರ್ಟ್ ತೀರ್ಪನ್ನು ನಾನು ಸ್ವಾಗತ ಮಾಡುತ್ತೇನೆ. ಈಗಾಗಲೇ ಕಾಂಗ್ರೆಸ್ನಿಂದ ಎಸ್ಸಿ, ಎಸ್ಟಿ ಸಮುದಾಯದವರು ದೂರ ಆಗಿದ್ದಾರೆ. ಮುಸಲ್ಮಾನರು ಸಹ ದೂರ ಆಗ್ತಾರೆ. ಎಲ್ಲಿ ಅವರ ಮತ ಬಿಜೆಪಿ ಕಡೆ ಹೋಗುತ್ತೋ ಎಂಬ ಭಯದಿಂದ ಸಾಮರಸ್ಯ ಕದಡುವ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು.
ಈ ತೀರ್ಪಿನ ಬಗ್ಗೆ ಎಲ್ಲೂ ಹರ್ಷೋದ್ಘಾರ ಮಾಡಬಾರದು. ಸಂಘರ್ಷಕ್ಕೆ ಅವಕಾಶ ಕೊಡಬಾರದು. ಮುದ್ದು ಮನಸ್ಸಿನ ಹೆಣ್ಣು ಮಕ್ಕಳಿಗೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲು ಹುನ್ನಾರ ನಡೆದಿದೆ. ಶಿಕ್ಷಣದಿಂದ ವಂಚಿತರಾದರೆ ಭಯೋತ್ಪಾದಕತೆಗೆ ಕುಮ್ಮಕ್ಕು ನೀಡಬಹುದೆಂಬ ಚಿಂತನೆ ನಡೆದಿತ್ತು. ಹಾಗಾಗಿ, ಯಾವುದೇ ಕಾಂಗ್ರೆಸ್ ಮುಖಂಡರ ಮಾತು ಕೇಳಬೇಡಿ ಎಂದು ಮನವಿ ಮಾಡಿದರು.
ಶಾಲಾ-ಕಾಲೇಜುಗಳಲ್ಲಿ ಎಲ್ಲರೂ ಸಮಾನರು : ಹಿಜಾಬ್ ಕಡ್ಡಾಯವಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಎಲ್ಲರೂ ಸಮಾನರು ಎಂದು ತೀರ್ಪು ಬಂದಿದೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ: ಯಾವುದೇ ಧರ್ಮದ ಮಕ್ಕಳಾದ್ರೂ ಸರಿ ಶಿಕ್ಷಣಕ್ಕೆ ಮೊದಲ ಆದ್ಯತೆ ; ಹೈಕೋರ್ಟ್ ತೀರ್ಪು ಬಗ್ಗೆ ಸಚಿವರ ಅಭಿಪ್ರಾಯ ಹೀಗಿದೆ..
ವಿಧಾನಸೌಧದಲ್ಲಿ ಮಾತನಾಡಿದ ಅವರು, ಹಲವು ದಿನಗಳಿಂದ ದೇಶಾದ್ಯಂತ ಹಿಜಾಬ್ ವಿವಾದದ ತೀರ್ಪು ಕುತೂಹಲ ಮೂಡಿಸಿತ್ತು. ಹಿಜಾಬ್ ವಿಚಾರವಾಗಿ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಸರ್ಕಾರ ಹೊರಡಿಸಿದ್ದ ಸಮವಸ್ತ್ರದ ಆದೇಶವನ್ನು ಕೋರ್ಟ್ ಎತ್ತಿ ಹಿಡಿದಿದೆ.
ಕೇಸರಿ ಆಗಲೀ ಅಥವಾ ಯಾವುದೇ ಧಾರ್ಮಿಕ ಧಿರಿಸುಗಳನ್ನು ಧರಿಸಬಾರದು ಎಂದರು. ಇನ್ನೂ ಸಮವಸ್ತ್ರ ಕಡ್ಡಾಯ ಎಂದಾಗ ಏಕಪಕ್ಷೀಯ ಆದೇಶ ಎಂದು ಆರೋಪಿಸಿದ್ದರು. ಆದರೀಗ ಕಾಲೇಜುಗಳಲ್ಲಿ ಎಲ್ಲರೂ ಸಮಾನರು ಎಂದು ತೀರ್ಪು ನೀಡಿದೆ ಎಂದು ತಿಳಿಸಿದರು.