ಬೆಂಗಳೂರು/ ಮೈಸೂರು: ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕ್ರತಿಕ ನಗರಿ ಮೈಸೂರು ನಡುವಣ ದಶಪಥ ರಸ್ತೆಯಲ್ಲಿ, 56.20 ಕಿ.ಮೀ ಬೆಂಗಳೂರು-ನಿಡಘಟ್ಟ ಮೊದಲ ಹಂತದ ಕಾಮಗಾರಿ 2021ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸಂಬಂಧ ಈಗಾಗಲೇ ಶೇ.90ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಎನ್ಎಚ್ 271 ಬೆಂಗಳೂರು -ನಿಡಘಟ್ಟ ಹೈವೇ ಪ್ರಾರಂಭ ಮಾಡುತ್ತೇವೆ. ಸುಮಾರು 56.20 ಕಿಲೋ ಮೀಟರ್ ಉದ್ದದ ರಸ್ತೆ ಇದಾಗಿದ್ದು, 2,190 ಕೋಟಿ ವೆಚ್ಚದಲ್ಲಿ 10 ಪಥದ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಎರಡನೇ ಪ್ಯಾಕೇಜ್, 61.10 ಕಿ.ಮೀ ನಿಡಘಟ್ಟ - ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಈ ತಿಂಗಳ ಅಂತ್ಯದಲ್ಲಿ ಪ್ರಾರಂಭವಾಗಲಿದ್ದು, 2283.50 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 2021ಕ್ಕೆ ಕಾಮಗಾರಿ ಮುಕ್ತಾಯವಾಗುತ್ತದೆ ಎಂದು ವಿವರಿಸಿದರು.
ಮೊದಲ ಹಂತದ ಕಾಮಗಾರಿಗೆ ಸುಮಾರು 500 ಹೆಕ್ಟೇರ್ ಭೂಮಿ ಸ್ವಾಧೀನ ಪಡಿಸಿಕೊಂಡಿದ್ದು, 3 ಸಾವಿರ ಕೋಟಿ ಪರಿಹಾರ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಬಿಡದಿ ಬಳಿ 7 ಕಿ.ಮೀ. ಬೈಪಾಸ್ ರಸ್ತೆ, ಚನ್ನಪಟ್ಟಣ-ರಾಮನಗರ 22 ಕಿ.ಮೀ, ಮದ್ದೂರು ಬಳಿ 6 ಕೀ.ಮೀ ಬೈಪಾಸ್ ರಸ್ತೆ ಮತ್ತು 6 ಕಿ.ಮೀ ಎಲಿವೇಟೆಡ್ ರಸ್ತೆ ನಿರ್ಮಿಸಲಾಗುತ್ತದೆ. ಜತೆಗೆ ಮಂಡ್ಯ ಬಳಿ 9 ಕಿ.ಮೀ ಹಾಗೂ ಶ್ರೀರಂಗಪಟ್ಟಣದ ಬಳಿ 7 ಕಿ.ಮೀ ಬೈಪಾಸ್ ರಸ್ತೆ ನಿರ್ಮಾಣಗೊಳ್ಳಲಿದೆ. ರಾಮನಗರ-ಚನ್ನಪಟ್ಟಣ 22 ಕಿ.ಮೀ ರಸ್ತೆಯನ್ನು ಎಲಿವೇಟೆಡ್ ರಸ್ತೆಯನ್ನಾಗಿ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 37 ಸಾವಿರ ಕೋಟಿ ರೂ. ವೆಚ್ಚದಲ್ಲಿ 3600 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಪ್ರಾರಂಭವಾಗಿದೆ ಎಂದು ವಿವರಿಸಿದರು.
ಇತರೆ ರಾಷ್ಟ್ರೀಯ ಹೆದ್ದಾರಿ ಯೋಜನೆ...
- ಶ್ರೀರಂಗಪಟ್ಟಣ-ಬೀದರ್ ರಸ್ತೆ ಪ್ರಗತಿಯಲ್ಲಿದೆ
- 1008 ಕೋಟಿ ರೂ. ವೆಚ್ಚದ ದಿಂಡಗಲ್- ಬೆಂಗಳೂರು 171 ಕಿ.ಮೀ. ರಸ್ತೆ ಶೇ.97ರಷ್ಟು ಪೂರ್ಣ
- 452 ಕೋಟಿ ರೂ. ವೆಚ್ಚದ ಚನ್ನರಾಯಪಟ್ಟಣ ಚತುಷ್ಪಥ ರಸ್ತೆಗೆ ಟೆಂಡರ್
- ಶಿರಾಡಿಘಾಟ್ ಸುರಂಗ ಮಾರ್ಗಕ್ಕೆ 12 ಸಾವಿರ ಕೋಟಿ ರೂ. ರಸ್ತೆ ಕಾಮಗಾರಿ
- ಬೆಂಗಳೂರು-ಚೆನೈ ಎಕ್ಸ್ಪ್ರೆಸ್ ವೇ ಮಾಲೂರುವರೆಗೆ 17 ಕಿ.ಮೀ. 1374 ಕೋಟಿ ವೆಚ್ಚ, ಬಂಗಾರಪೇಟೆ- ಬೆತ್ತಂಪಲ್ಲಿ 844 ಕೋಟಿ ರೂ. ಕಾಮಗಾರಿ
- 4514 ಕೋಟಿ ರೂ. ವೆಚ್ಚದಲ್ಲಿ ದಾಬಸ್ಪೇಟೆ-ರಾಮನಗರ 0- 82 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ.
- ರಾಮನಗರ- ಬೆಲಗೊಂಡನಹಳ್ಳಿ 79 ಕಿ.ಮೀ. (4092 ಕೋಟಿ ವೆಚ್ಚ), ಬೆಲಗೊಂಡನಹಳ್ಳಿ-ತಮಿಳುನಾಡು ಗಡಿವರೆಗೆ 35ಕಿ.ಮೀ.(1586 ಕೋಟಿ ರೂ) ಕಾಮಗಾರಿ.
ತಿರುಪತಿ ಹುಂಡಿಗೆ ಹಾಕಿದಂತೆ...
ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಹಾಗೂ ಸಹಾಯಕ ಎಂಜಿನಿಯರ್ಗಳ ಆಯ್ಕೆ ಪರೀಕ್ಷೆ, ಅತ್ಯಂತ ಪಾರದರ್ಶಕವಾಗಿ ನಡೆಯಲಿದ್ದು, ನೇಮಕಾತಿಯಲ್ಲಿ ಅವ್ಯವಹಾರಕ್ಕೆ ಅವಕಾಶವಿಲ್ಲ ಎಂದು ಸಚಿವ ರೇವಣ್ಣ ಸ್ಪಷ್ಟಪಡಿಸಿದರು.
ಅಭ್ಯರ್ಥಿಗಳು ಯಾರಿಗೂ ದುಡ್ಡು ಕೊಡಬೇಡಿ. ದುಡ್ಡುಕೊಟ್ಟರೆ ಅದು ತಿರುಪತಿ ಹುಂಡಿಗೆ ಹಾಕಿದಂತಾಗುತ್ತದೆ ಎಂದು ರೇವಣ್ಣ ಮನವಿ ಮಾಡಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಎಂಜಿನಿಯರ್/ಸಹಾಯಕ ಎಂಜಿನಿಯರ್ ಪರೀಕ್ಷೆಯ ಜವಾಬ್ದಾರಿ ವಹಿಸಲಾಗಿದೆ. ಅದರಲ್ಲಿ ಏನೇ ಲೋಪವಾದರೂ ಅವರೇ ಹೊಣೆಗಾರರಾಗುತ್ತಾರೆ. ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಮೌಖಿಕ ಸಂದರ್ಶನ ನಡೆಸಲಾಗುವುದು. ಯಾವುದೇ ಅವ್ಯವಹಾರಕ್ಕೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.