ಹೊಸಪೇಟೆ : ಬಿಜೆಪಿಯ ಮುಖ್ಯ ಉದ್ದೇಶ ಭಾರತವನ್ನು ಸಂಪೂರ್ಣ ಹಿಂದೂ ರಾಷ್ಟ್ರವನ್ನಾಗಿಸುವುದು. ಇದು ಆರ್ ಎಸ್ ಎಸ್ ರಾಜಕೀಯ ಕುತಂತ್ರ. ಭಾರತ ಪ್ರಜಾ ರಾಜ್ಯ, ಇಲ್ಲಿ ಯಾರು ಬೇಕಾದರು ಜೀವಿಸಬಹುದು ಆದರೆ ಕೇಂದ್ರ ಸರಕಾರ ಮುಸ್ಲಿಂ ಧರ್ಮವನ್ನು ಟಾರ್ಗೇಟ್ ಮಾಡಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ಆರೋಪಿಸಿದರು.
ನಗರದ ಭಾರತ ಕಮ್ಯೂನಿಸ್ಟ್ ಪಕ್ಷದ ಕಚೇರಿಯಲ್ಲಿಂದು ಕೇಂದ್ರ ಸರಕಾರ ಭಾರತ ಪೌರತ್ವ ಕಾನೂನು ತಿದ್ದುಪಡಿ ಕುರಿತು ಮಾತನಾಡಿದ ಅವರು, ಸಂಸತ್ತಿನ ಎರಡು ಸದನಗಳು ಸಿಎಬಿಯನ್ನು ಪಾಸು ಮಾಡಿವೆ. ಈ ಕಾಯ್ದೆಯ ಪ್ರಕಾರ ಡಿಸೆಂಬರ್ 31, 2014ರ ಪೂರ್ವ ಅಪಘಾನಿಸ್ಥಾನ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದ ಹಿಂದೂ, ಸಿಖ್, ಬೌದ್ಧ, ಕ್ರಿಶ್ಚಿಯನ್ ಹಾಗೂ ಜೈನ್ ಧರ್ಮಗಳ ಜನ ಸಮುದಾಯಗಳಿಗೆ ಕಾನೂನು ಬದ್ಧ ಪೌರತ್ವವನ್ನು ನೀಡುತ್ತದೆ ಎಂದು ಹೇಳುತ್ತದೆ. ಆದರೆ ಮುಸ್ಲಿಂ ಧರ್ಮದವರನ್ನು ವಲಸೆ ಬಂದವರು ಎಂದು ಹೇಳುತ್ತಿದ್ದಾರೆ. ಅದು ಸರಿಯಲ್ಲ ಎಂದು ಕೇಂದ್ರ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಧರ್ಮ, ಜಾತಿ, ಮತ, ಪಂಥ, ಭಾಷೆ, ಲಿಂಗ, ಪ್ರದೇಶ ಹಾಗೂ ಲಿಂಗದ ಆಧಾರದ ಮೇಲೆ ತಾರತಮ್ಯವನ್ನು ಮಾಡಬಾರದು ಎಂದು ಸಂವಿಧಾನ ಹೇಳುತ್ತದೆ. ಆದರೆ ಕೇಂದ್ರ ಸರಕಾರ ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ಮಾಡುತ್ತಿದೆ. ಇದು ಸಂವಿಧಾನ ವಿರೋಧಿ ನೀತಿಯಾಗಿದೆ. ಇದನ್ನು ಖಂಡಿಸಿ ಡಿಸೆಂಬರ್ 19 ರಂದು ದೇಶಾದ್ಯಂತ ಸಿಪಿಐಎಂ ಪ್ರತಿಭಟನೆಯನ್ನು ಮಾಡುತ್ತದೆ ಎಂದು ತಿಳಿಸಿದರು.
ಸಿಎಬಿ ದೇಶದಲ್ಲಿ ಕೋಮು ಗಲಭೆಯನ್ನು ಪ್ರಚೋದನೆ ಮಾಡುತ್ತದೆ. ಸಾಮಾಜಿಕ ಸಾಮರಸ್ಯ ಹಾಳಾಗುತ್ತದೆ. ದೇಶದ ಐಕ್ಯತೆಗೆ ಹಾಗೂ ಸಮಗ್ರತೆಗೆ ಹಾನಿಯುಂಟು ಮಾಡುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸರಕಾರ ಹಾಗೂ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೋರಟಿದ್ದಾರೆ ಎಂದು ಕಿಡಿಕಾರಿದರು.