ಬಳ್ಳಾರಿ: ತಾಲೂಕಿನ ಸಿಂಧುವಾಳ ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ ಗಾದಿಲಿಂಗ ಅವರು, ವಿಭಿನ್ನ ರೀತಿಯ ಪೆನ್ಸಿಲ್ ಸ್ಕೆಚ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಎಂಜಿನಿಯರಿಂಗ್ ಓದಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಗಾದಿಲಿಂಗ, ಅಲ್ಲಿರಲು ಇಷ್ಟಪಡದೇ ಚಿಕ್ಕಂದಿನಿಂದಲೂ ಆಸಕ್ತಿ ಹೊಂದಿದ್ದ ಚಿತ್ರಕಲೆ ಮುಂದುವರೆಸಲು ನಿರ್ಧರಿಸಿದರು. ಬಳಿಕ ತಮ್ಮೂರಿಗೆ ಮರಳಿ, ಪೆನ್ಸಿಲ್ ಸ್ಕೆಚ್ ಮಾಡಲು ಆರಂಭಿಸಿದರು. ಇವರ ಕಲಾ ಕುಂಚದಲ್ಲಿ ಹಲವು ಗಣ್ಯರ ಚಿತ್ರಗಳು ಮೂಡಿ ಬಂದಿವೆ.
ಯಾವುದೇ ತರಬೇತಿ ಇಲ್ಲ: ಇವರು ಬಿಡಿಸುವ ಚಿತ್ರಗಳತ್ತ ಒಮ್ಮೆ ಕಣ್ಣಾಡಿಸಿದ್ರೆ ಸಾಕು, ಇವರು ಯಾವುದಾದರೂ ಚಿತ್ರಕಲೆ ಶಾಲೆಯಲ್ಲಿ ತರಬೇತಿ ಪಡೆದಿರಬೇಕು ಎಂದು ಅನಿಸುವುದು ಸಹಜ. ಆದರೆ, ಇವರು ಚಿತ್ರಕಲೆ ಕಲಿಯಲು ಯಾವುದೇ ತರಬೇತಿ ಶಾಲೆಗೆ ಹೋದವರಲ್ಲ. ಬದಲಾಗಿ. ಚಿಕ್ಕವಯಸ್ಸಿನಲ್ಲಿ ಬಳಪ ಹಿಡಿದು ಸ್ಲೇಟಿನ ಮೇಲೆ, ಬಣ್ಣದ ಗೋಡೆಯ ಮೇಲೆ ಗೀಚುತ್ತಿದ್ದ ಗೀಳು ಇಂದಿಗೂ ಅವರೊಂದಿಗಿದೆ.
ಸಕಲಕಲಾವಲ್ಲಭ: ಪ್ರಕೃತಿಯ ಸೊಬಗನ್ನು ಪೇಪರ್ ಮೇಲೆ ಗೀಚೋದು, ಪ್ರಸಿದ್ಧ ತಾಣಗಳ ಚಿತ್ರವನ್ನ ಕಪ್ಪು ಬಿಳುಪಿನಲ್ಲಿ ಬಿಡಿಸೋದು. ನಿಮ್ಮ ಮುಖದ ಚಹರೆಯನ್ನ ಸೇಮ್ ಟು ಸೇಮ್ ಬಿಡಿಸುವ ಫೇಸ್ ಸ್ಕೆಚ್ಗೆ ಇವರು ಹೇಳಿ ಮಾಡಿಸಿದವರು. ಎಲ್ಲ ರೀತಿಯ ಚಿತ್ರಗಳನ್ನ ಗೀಚಬಲ್ಲ ಕಲೆಯುಳ್ಳ ಇವರು ಒಂಥರಾ ಸಕಲ ಕಲಾವಲ್ಲಭ.
ವೈವಿಧ್ಯಮಯ ಚಿತ್ರಗಳ ಸಮ್ಮಿಶ್ರಣ: ನಡೆದಾಡುವ ದೇವರು, ಕರ್ನಾಟಕ ರತ್ನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಚಿತ್ರ, ಏಸುವಿನ ಶಿಲುಬೆಗೇರಿಸಿದ ದೃಶ್ಯ, ಸ್ವಾಮಿ ವಿವೇಕಾನಂದರ, ಮಹದೇಶ್ವರ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಸಾಹಸಸಿಂಹ ವಿಷ್ಣುವರ್ಧನ್, ಕಿಚ್ಚ ಸುದೀಪ್ ಮತ್ತು ಹಲವು ವನ್ಯಜೀವಿಗಳನ್ನ ಒಳಗೊಂಡಂತೆ ವಿವಿಧ ರೀತಿಯ ಚಿತ್ರಗಳನ್ನು ಇವರು ಬಿಡಿಸಿದ್ದಾರೆ.
ಕೋವಿಡ್ ಸಮಯದಲ್ಲಿ ಬಹುಭಾಷ ನಟ ಸೋನುಸೂದ್ ಅವರು ಮಾಡಿದ ಸಾಮಾಜಿಕ ಕಾರ್ಯಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಅವರ ಎಲ್ಲ ಕಾರ್ಯವನ್ನು ಒಂದೇ ಚಿತ್ರದಲ್ಲಿ ತೋರಿಸಿದ್ದಾರೆ ಗಾದಿಲಿಂಗ ಅವರು. ರಾಜಕೀಯ ನಾಯಕರು, ಚಲನಚಿತ್ರ ನಟ, ನಟಿಯರಿಂದ ಹಿಡಿದು ಸಾಮಾನ್ಯರವರೆಗೆ ಎಲ್ಲ ರೀತಿಯ ಚಿತ್ರಗಳು ಗಾದಿಲಿಂಗ ಅವರ ಕೈಚಳಕದಲ್ಲಿ ಮೂಡಿಬಂದಿವೆ.
ಗಾದಿಲಿಂಗ ಅವರು ಬಳ್ಳಾರಿ ನಗರದಲ್ಲಿ ಒಂದು ಚಿತ್ರಕಲಾ ಅಂಗಡಿ ತರೆಯುವ ಉದ್ದೇಶ ಹೊಂದಿದ್ದು, ಕಲಾಭಿಮಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಇವರು ಬಿಡಿಸಿದ ಚಿತ್ರಗಳನ್ನು ಯೂಟ್ಯೂಬ್ ಮುಖಾಂತರ ಕೂಡ ನೋಡಬಹುದು. ಇವರಿಗೆ ನೆರವು ನೀಡಬಯಸುವವರು ಮೊಬೈಲ್ ಸಂಖ್ಯೆ- 9346511615 ಸಂಪರ್ಕಿಸಬಹುದು.